ನ್ಯೂಸ್ ನಾಟೌಟ್ :ಸರ್ಕಾರದ ನಿಯಮದಂತೆ ಜಾತಿಗಣತಿ ಗಾಗಿ ಶಿಕ್ಷಕರು ಮನೆ ಮನೆಗೆ ತೆರಳುತ್ತಿದ್ದಾರೆ. ಹೀಗೆ ಹೋದ ಶಿಕ್ಷಕಿಯನ್ನೇ (Teacher) ವ್ಯಕ್ತಿಯೊಬ್ಬ ಕೂಡಿ ಹಾಕಿದ ಘಟನೆ ಬೆಂಗಳೂರಿನ ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕೋತಿ ಹೊಸಹಳ್ಳಿಯಲ್ಲಿ ನಡೆದಿದೆ.
ಬುಧವಾರ ಸಂಜೆ ಶಿಕ್ಷಕಿ ಸುಶೀಲಮ್ಮ ಅವರು ಸಂದೀಪ್ ಎಂಬವರ ಮನೆಗೆ ಆಗಮಿಸಿದ್ಡರು, ನಾವು ಗಣತಿಗೆ ಬಂದಿದ್ದೇವೆ. ಆಧಾರ್ ಕಾರ್ಡ್ ಕೊಡಿ ಎಂದು ಕೇಳಿದ್ದರು. ಇದಕ್ಕೆ ಮನೆಯಲ್ಲಿದ್ದವರು, ನೀವು ಯಾವ ಕಂಪನಿಯವರು ಇಲ್ಲಿಗೆ ಏಕೆ ಬಂದಿದ್ದೀರಾ? ನೀವು ನಿಜವಾಗಿಯೂ ಟೀಚರ್ ಅಲ್ಲ ಎಂದು ಗಲಾಟೆ ಮಾಡಿದ್ದಾರೆ.
ಈ ಹೊತ್ತಿಗೆ ಟೀ ಶಾಪ್ ನಡೆಸುವ ಸಂದೀಪ್ ಮನೆಗೆ ಬಂದಿದ್ದಾನೆ. ಬಂದವನೇ ಜಗಳ ಮಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾನೆ. ಕಂಗಾಲಾದ ಟೀಚರ್ ಸುಶೀಲಮ್ಮ ನಾನು ಶಿಕ್ಷಕಿ ಎಂದು ಹೇಳಿದರೂ ಕೇಳದೇ ಸಂದೀಪ್ ಮನೆಯ ಕಾಪೌಂಡ್ನಲ್ಲಿ ಕೂಡಿಹಾಕಿದ್ದ. ಕೊನೆಗೆ ಭಯಗೊಂಡ ಸುಶೀಲಮ್ಮ ಪೊಲೀಸ್ ಕಂಟ್ರೋಲ್ ರೂಮ್ 112ಗೆ ಕರೆ ಮಾಡಿ ದೂರು ನೀಡಿದ್ದಾರೆ.
ಕರೆಯ ಬೆನ್ನಲ್ಲೇ ಸಂದೀಪ್ ಮನೆಗೆ ತೆರಳಿ ಸುಶೀಲಮ್ಮ ಅವರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕೆ ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಸಂದೀಪ್ ಬಂಧಿಸಿ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ













