ನ್ಯೂಸ್ ನಾಟೌಟ್: “ಉಪವಾಸ ಮುಗಿಸಿ ಅನ್ನದ ತಟ್ಟೆಗೆ ಕೈ ಇಟ್ಟಿದ್ದ ಸಮಯ. ಇನ್ನೇನು ಅನ್ನದ ತುತ್ತು ಬಾಯಿಗೆ ಇಡಬೇಕು, ಅಷ್ಟರಲ್ಲಿ ಮೊಬೈಲ್ ರಿಂಗಣಿಸಿತು. ನಾನು ವಿಷ ಕುಡಿದಿದ್ದೇನೆ, ಹೆಚ್ಚು ಹೊತ್ತು ಬದುಕಲಾರೆ, ಅವರೆಲ್ಲ ನನ್ನ ಮರ್ಯಾದೆ ತೆಗೆದರು, ನಾನು ಇನ್ನು ಬದುಕಿ ಪ್ರಯೋಜನವಿಲ್ಲ ಅನ್ನುವ ಧ್ವನಿ ಅತ್ತ ಕಡೆಯಿಂದ ಕೇಳಿಸಿತು. ಗಾಬರಿಯಿಂದ ಅನ್ನದ ತಟ್ಟೆಯನ್ನು ಅಲ್ಲೇ ಬಿಟ್ಟೆ. ನನ್ನ ಆಂಬ್ಯುಲೆನ್ಸ್ ತೆಗೆದುಕೊಂಡು ಮಿಂಚಿನ ವೇಗದಲ್ಲಿ ಸ್ನೇಹಿತನ ಜೊತೆಗೆ ತೆರಳಿದೆ. ಸ್ಥಳಕ್ಕೆ ಹೋದಾಗ ಗೆಳೆಯನ ಬಾಯಲ್ಲಿ ನೊರೆ ಬರುತ್ತಿತ್ತು. ವಿಲವಿಲ ಒದ್ದಾಡುತ್ತಿದ್ದವನನ್ನು ಸಂತೈಸಿ ಅಷ್ಟೇ ವೇಗದಲ್ಲಿ ಆಸ್ಪತ್ರೆಗೆ ಸೇರಿಸಿದೆ. ಈಗಲೇ ಏನು ಗ್ಯಾರಂಟಿ ಕೊಡುವುದಕ್ಕೆ ಆಗುವುದಿಲ್ಲವೆಂದರು ವೈದ್ಯರು..”
ಇಷ್ಟು ಮಾತನ್ನು ಹೇಳುವಾಗ ಸುಳ್ಯದ ಆಪತ್ಪಾಂಧವ ಪ್ರಗತಿ ಆಂಬ್ಯುಲೆನ್ಸ್ ಚಾಲಕ ಅಚ್ಚುವಿನ ಧ್ವನಿಯಲ್ಲಿ ನಡುಕವಿತ್ತು. ರಕ್ಷಿತ್ ಅನ್ನುವ ಯುವಕ ವಿಷ ಸೇವಿಸಿ ಜೀವನ್ಮರಣದ ಸ್ಥಿತಿಯಲ್ಲಿದ್ದಾಗ ಪ್ರಗತಿ ಅಚ್ಚು ಅಲಿಯಾಸ್ ಅಬ್ದುಲ್ ರಝಾಕ್ ತೋರಿದ ಸಮಯ ಪ್ರಜ್ಞೆ ಪ್ರಶಂಸನೀಯ. ಇಡೀ ಘಟನೆಯನ್ನು ಅಚ್ಚು ನ್ಯೂಸ್ ನಾಟೌಟ್ ಜೊತೆಗೆ ತೆರೆದಿಟ್ಟಿದ್ದಾರೆ. ರಕ್ಷಿತ್ ಗೆ ನಿಜವಾಗಿ ಆಗಿದ್ದೇನು..? ಆತ ವಿಷ ಕುಡಿಯುವುದಕ್ಕೆ ಕಾರಣವೇನು..? ಕೊನೆಯ ಕ್ಷಣದಲ್ಲಿ ರಕ್ಷಿತ್ ಹೇಳಿದ್ದೇನು..? ಇದೆಲ್ಲದರ ಬಗೆಗಿನ ಕಂಪ್ಲೀಟ್ ಸ್ಟೋರಿಯನ್ನು ಅಚ್ಚುವಿನ ಮಾತಿನಲ್ಲೇ ಓದೋಣ..
“ಮಾ.15, ರಂದು ರಾತ್ರಿ ಉಪವಾಸ ಬಿಟ್ಟ ಸಂದರ್ಭ. ಆಗಷ್ಟೇ ಜ್ಯೂಸ್ ಕುಡಿದಿದ್ದೆ. ತಡರಾತ್ರಿ ಆಗಿದ್ದರೂ ಊಟ ಮಾಡಿರಲಿಲ್ಲ. ಸ್ವಲ್ಪ ಸಾಂಬಾರ್ ಹಿಡಿದುಕೊಂಡು ಊಟ ಮಾಡೋಣವೆಂದು 12 ಗಂಟೆಗೆ ನಮ್ಮ ಪ್ರಗತಿ ಲಾಡ್ಜ್ ಗೆ ಬಂದೆ. ಇನ್ನೇನು ಅನ್ನವನ್ನು ತಟ್ಟೆಗೆ ಹಾಕಿಕೊಂಡಿದ್ದೆ, ಒಂದು ತುತ್ತು ಕೂಡ ಗಂಟಲಲ್ಲಿ ಇಳಿದಿರಲಿಲ್ಲ. ನನ್ನ ಫೋನ್ ರಿಂಗಣಿಸಿತು. ಅದು ನನ್ನ ಆತ್ಮೀಯ ಸ್ನೇಹಿತ ರಕ್ಷಿತ್ ನ ಕರೆ ಆಗಿತ್ತು. ಮಾಮೂಲಿ ಏನಾದರೂ ತುರ್ತು ಸಂದರ್ಭಗಳಿದ್ದರೆ ಕರೆ ಮಾಡುತ್ತಾನೆ. ಹಾಗೆಂದು ನಾನು ಕರೆ ಸ್ವೀಕರಿಸಿದೆ. ಅಚ್ಚು..ನಾನು ಇನ್ನು ಹೆಚ್ಚು ಹೊತ್ತು ಬದುಕಲಾರೆ, ಅವರೆಲ್ಲ ನನ್ನ ಮರ್ಯಾದೆ ತೆಗೆದರು, ನಾನು ಇನ್ನು ಬದುಕಿ ಪ್ರಯೋಜನವಿಲ್ಲ ಅನ್ನುವ ಧ್ವನಿ ಅತ್ತ ಕಡೆಯಿಂದ ಕೇಳಿಸಿತು. ನೀನು ಸಾಯುವ ಮಾತುಗಳನ್ನು ಆಡಬೇಡ, ನಾಳೆ ನಿನ್ನನ್ನು ನೇರವಾಗಿ ಭೇಟಿಯಾಗಿ ಮಾತನಾಡುತ್ತೇನೆ ಎಂದೆ. ಅಚ್ಚು ಬಾಯ್ ನಾನು ಈಗಾಗಲೇ ವಿಷ ಸೇವಿಸಿ ಆಗಿದೆ. ನಾನು ಸಾಯುವ ಹಂತದಲ್ಲಿದ್ದೇನೆ ಎಂದ. ನೀನು ಹುಚ್ಚು ಮಾತಾಡಬೇಡ.. ನೀನು ಈಗ ಇರುವ ಜಾಗ ಹೇಳು ಅಂತ ಹೇಳಿದೆ. ಉಬರಡ್ಕ ರಸ್ತೆ ಕೂಡುವ ಮೀನು ಮಾರುಕಟ್ಟೆ ಹತ್ರ ಇದ್ದೇನೆ ಅಂತ ಹೇಳಿದ. ಗೆಳೆಯ ಅಶ್ರಫ್ ನನ್ನು ಕರೆದುಕೊಂಡು ಎರಡು ನಿಮಿಷದಲ್ಲಿ ಸ್ಥಳಕ್ಕೆ ತಲುಪಿದೆ. ರಕ್ಷಿತ್ ನ ಬಾಯಲ್ಲಿ ನೊರೆ ಬರುತ್ತಿತ್ತು. ನೋವು ತಡೆಯಲಾಗದೆ ಮೈ ಪರಚಿಕೊಂಡಿದ್ದ, ನೇರವಾಗಿ ನನ್ನ ಆಂಬ್ಯುಲೆನ್ಸ್ ನಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದೆ. ಅಲ್ಲಿಂದ ಕೆವಿಜಿಗೆ ಕರೆದುಕೊಂಡು ಬಂದೆವು, ಆತನ ಸ್ನೇಹಿತರೆಲ್ಲ ಅಲ್ಲಿಗೆ ಬಂದರು. ಮೂರು ದಿವಸ ಬೇಕು, ಸದ್ಯ ಗಂಭೀರ ಸ್ಥಿತಿಯಲ್ಲಿದ್ದೇನೆ ಎಂದು ವೈದ್ಯರು ಹೇಳಿದ್ದಾರೆ ಎಂದು ಅಚ್ಚು ಘಟನೆಯನ್ನು ನೆನಪಿಸಿಕೊಂಡರು. ಈ ಹಿಂದೆ ಪೆರ್ನಾಲ್ ಹಬ್ಬದಂದು ಕಾಂತಮಂಗಲದಲ್ಲಿ ಕಲ್ಲು ಹೊತ್ತು ಹಾಕಿ ವ್ಯಕ್ತಿಯೋರ್ವನನ್ನು ಕೊಲೆ ಮಾಡಲಾಗಿತ್ತು. ಆಗ ಮೃತ ದೇಹ ತೆಗಿಲಿಕ್ಕೆ ಹಬ್ಬದ ಸಂಭ್ರಮವನ್ನು ಬಿಟ್ಟು ಅಚ್ಚು ಹೋಗಿದ್ದನ್ನು ಇಲ್ಲಿ ಸ್ಮರಿಸಬಹುದು.










