ನ್ಯೂಸ್ ನಾಟೌಟ್: ಜಾಲ್ಸೂರು ಗ್ರಾಮದ ಅತೀ ಪುರಾತನ ಶ್ರೀ ಕೃಷ್ಣ ಭಜನಾ ಮಂದಿರದ ನೂತನ ಮಂದಿರ ನಿರ್ಮಾಣ ಹಂತದಲ್ಲಿದ್ದು ಇದರ ವೀಕ್ಷಣೆಗೆ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾ.9 ರಂದು ಭೇಟಿ ನೀಡಿದರು.
ಬಳಿಕ ಆಶೀರ್ವಚನ ನೀಡಿ ಮಾತನಾಡಿದ ಶ್ರೀಗಳು, ‘ಗ್ರಾಮ ದೇವಸ್ಥಾನವಾದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನಕ್ಕೆ ಪ್ರತಿ ಸೋಮವಾರ ಗ್ರಾಮದ ಪ್ರತಿ ಮನೆಯವರು ಭೇಟಿ ನೀಡಿ ದೇವಾಲಯದಲ್ಲಿ ಸೇವೆ ಮಾಡಿಸಬೇಕು. ಭಜನಾ ಮಂದಿರದ ಅಭಿವೃದ್ಧಿಗೆ ಕೊಡುಗೆ ನೀಡುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಹಾಗೆಯೇ ಜಾತಿ ಭೇದ ಭಾವ, ಮೇಲು-ಕೀಳು ಬಿಟ್ಟು ಇನ್ನೊಬ್ಬರ ಒಳಿತಿನಲ್ಲಿ ಮತ್ತು ಸಂತೋಷದಲ್ಲಿ ಖುಷಿ ಕಾಣಬೇಕು ಎಂದು ಕಿವಿ ಮಾತು ಹೇಳಿದರು. ಜಗತ್ತಿಗೆ ಬೇಕಾದವನು ಕೃಷ್ಣ, ಹಾಗಾಗಿ ಸೋಣಂಗೇರಿ ಶ್ರೀ ಕೃಷ್ಣ ಭಜನಾ ಮಂದಿರ ಭಕ್ತಿ & ಶಕ್ತಿಯ ಸಾನಿಧ್ಯವಾಗಿದ್ದು ಎಲ್ಲರು ಒಗ್ಗಟ್ಟಿನಿಂದ ಈ ಮಂದಿರಕ್ಕೆ ಶ್ರಮ ವಹಿಸಿ ಕೆಲಸ ಮಾಡಿ ಇದೇ ಮೇ ತಿಂಗಳಲ್ಲಿ ನೂತನ ಮಂದಿರದ ಪ್ರತಿಷ್ಠಾ ಕಾರ್ಯಕ್ರಮ ನಡೆಸುವಂತೆ ಸಲಹೆ ನೀಡಿದರು. ಮುಂದಿನ ಮಂದಿರ ನಿರ್ಮಾಣ ಕಾರ್ಯ ಹಾಗೂ ಪ್ರತಿಷ್ಠಾ ಕಾರ್ಯಗಳಿಗೆ ಸಲಹೆ ಸಹಕಾರಗಳಿಗೆ ಗೌರವಾಧ್ಯಕ್ಷರಾಗಿ ಮೋಹನದಾಸ ಪರಮಹಂಸ ಸ್ವಾಮೀಜಿಯವರನ್ನು ಆಯ್ಕೆ ಮಾಡಲಾಯಿತು. ಶ್ರೀಗಳು ನೂತನ ಮಂದಿರ ನಿರ್ಮಾಣಕ್ಕೆ ತಲಾ 25,೦೦೦ ನಗದು ನೀಡುವುದಾಗಿ ಭರವಸೆ ನೀಡಿದರು. ನಿವೃತ್ತ ಯೋಧ ಅಡ್ಡಂತ್ತಡ್ಡ ದೇರಣ್ಣ ಗೌಡ 11,೦೦೦ ನಗದು ಸೇರಿದಂತೆ ನೆರೆದಿದ್ದ ಊರಿನವರು ತಮ್ಮ ಕೈಲಾದ ಸಹಾಯ ಮಾಡುವುದಾಗಿ ತಿಳಿಸಿದರು.
ಭಜನಾ ಮಂದಿರದ ಅಧ್ಯಕ್ಷ ಗಿರಿಧರ ಗೌಡ ನಾಯರ್ ಹಿತ್ಲು, ಸಂಚಾಲಕ ಸತ್ಯಶಾಂತಿ ತ್ಯಾಗಮೂರ್ತಿ, ಪ್ರಮುಖರಾದ ಸುಪ್ರೀತ್ ಮೋಂಟಡ್ಕ, ಲೀಲಾವತಿ ಕರುಣಾಕರ ನಡುಮನೆ, ರುಕ್ಮಯ್ಯ ಗೌಡ ನಡುಮನೆ, ಆಡಳಿತ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಊರಿನವರು ಹಾಜರಿದ್ದರು.













