ನ್ಯೂಸ್ ನಾಟೌಟ್ : ಸತತ 7 ವರ್ಷ ತನ್ನ ಮನೆ ಎಲ್ಲಿದೆ ಎಂಬುದನ್ನು ಜ್ಞಾಪಿಸಿಕೊಳ್ಳಲು ಸಾಧ್ಯವಾಗದೇ ಪರಿತಪಿಸುತ್ತಿದ್ದ ಬಾಲಕಿಯನ್ನು ಮೈಸೂರು ಜಿಲ್ಲಾಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು, ಪೋಷಕರ ಮಡಿಲು ಸೇರುವಂತೆ ಮಾಡಿದ್ದಾರೆ.
ಬೆಂಗಳೂರಿನ ಕೆಂಗೇರಿಯ ನಿವಾಸಿಯಾದ ಬಾಲಕಿ ಪೋಷಕರಿಂದ ಬೇರ್ಪಟ್ಟು ಮೈಸೂರಿಗೆ ಬಂದಿದ್ದಳು. ನಗರದಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ಈಕೆಯನ್ನು ಮೈಸೂರು ನಗರ ಪೊಲೀಸರು ರಕ್ಷಿಸಿ ಬಾಲಕಿಯರ ಬಾಲ ಮಂದಿರದ ವಶಕ್ಕೆ ನೀಡಿದ್ದರು.
ಬಾಲಕಿ ಬಗ್ಗೆ ಯಾವುದೇ ಸುಳಿವಿಲ್ಲದೆ ಸತತ ಏಳು ವರ್ಷಗಳಿಂದ ಪೋಷಕರನ್ನು ಹುಡುಕುವ ಪ್ರಯತ್ನವನ್ನು ಜಿಲ್ಲಾಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಾಡುತ್ತಿದ್ದರು. ಕೊನೆಗೆ ಬಾಲಕಿ ನೀಡಿದ ಸಣ್ಣ ಸುಳಿವಿನ ಮೇರೆಗೆ ವಿಳಾಸವನ್ನು ಪತ್ತೆ ಹಚ್ಚಿ ಪೋಷಕರನ್ನು ಸೇರಿಸಿದ್ದಾರೆ.
ಗ್ರಾಮಾಂತರ ಬಸ್ ನಿಲ್ದಾಣ ವ್ಯಾಪ್ತಿಯ ಪ್ರದೇಶದಲ್ಲಿ ಭಿಕ್ಷೆ ಬೇಡುತ್ತಿದ್ದ ಬಾಲಕಿಯನ್ನು ಲಷ್ಕರ್ ಠಾಣೆ ಪೊಲೀಸರು ರಕ್ಷಿಸಿದ್ದರು. ಸಂತ್ರಸ್ತ ಬಾಲಕಿಯ ಪೋಷಕರ ಪತ್ತೆ ಹಚ್ಚುವ ಕಾರ್ಯ ನಡೆಸಿದ ಪೊಲೀಸರಿಗೆ ಯಾವುದೇ ಸುಳಿವು ಸಿಗದ ಕಾರಣ ಬಾಲಕಿಯನ್ನು ಬಾಲಕಿಯ ಬಾಲ ಮಂದಿರದಲ್ಲಿಯೇ ಇರಿಸಿ, ಶಿಕ್ಷಣಕ್ಕೂ ವ್ಯವಸ್ಥೆ ಕಲ್ಪಿಸಲಾಗಿತ್ತು. ಸರಕಾರಿ ಶಾಲೆಯಲ್ಲಿ 9ನೇ ತರಗತಿಯನ್ನು ಬಾಲಕಿ ಓದುತ್ತಿದ್ದಳು.
ಬಾಲಕಿಗೆ ತನ್ನ ಮತ್ತು ಅಪ್ಪ-ಅಮ್ಮನ ಹೆಸರು ಬಿಟ್ಟರೆ ಮನೆ ಎಲ್ಲಿದೆ ಎಂಬುದೇ ಬಾಲಕಿಯ ಸ್ಮರಣೆಯಲ್ಲಿ ಇರಲಿಲ್ಲ.
ಇತ್ತೀಚೆಗೆ ನಡೆದ ಆಪ್ತ ಸಮಾಲೋಚನೆಯಲ್ಲಿ ಕೆಂಗೇರಿಯಲ್ಲಿ ಮನೆಯಿದ್ದು, ಮನೆ ಬಳಿ ಮಸೀದಿ ಇತ್ತು ಎಂಬ ಅಂಶವನ್ನು ಬಾಲಕಿ ಹೇಳಿದ್ದಾಳೆ. ತಕ್ಷಣ ಕಾರ್ಯ ಪ್ರವೃತ್ತರಾದ ಜಿಲ್ಲಾಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರು ಮತ್ತು ಸಿಬ್ಬಂದಿ ಮೂಲಕ ಕೆಂಗೇರಿಯಲ್ಲಿ ಮಸೀದಿ ಆಸುಪಾಸಿನಲ್ಲಿರುವ ಮನೆಗಳಿಗೆ ಭೇಟಿ ಮಾಡಿ ಬಾಲಕಿ ಮತ್ತು ಆಕೆಯ ಪೋಷಕರ ಪೂರ್ವಾಪರ ವಿಚಾರಿಸಿದಾಗ ಪೋಷಕರು ಮತ್ತು ಸಂಬಂಧಿಕರು ಪತ್ತೆಯಾದರು. ಕೊನೆಗೆ ಪೋಷಕರ ವಶಕ್ಕೆ ಬಾಲಕಿಯನ್ನು ನೀಡಲಾಗಿದೆ ಎಂದು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರವಿಚಂದ್ರ ಮಾಹಿತಿ ನೀಡಿದರು.
ಮೈಸೂರಿನ ಬಸ್ ನಿಲ್ದಾಣದಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ಬಾಲಕಿಯನ್ನು ರಕ್ಷಿಸಿದ ಪೊಲೀಸರು, ಜಿಲ್ಲಾಮಕ್ಕಳ ರಕ್ಷಣಾ ಘಟಕಕ್ಕೆ ಒಪ್ಪಿಸಿದ್ದರು. ಮನೆ ಬಳಿ ಮಸೀದಿ ಇದೆ ಎನ್ನುವುದು ಬಿಟ್ಟರೆ ಬೇರೆ ಏನೂ ಆಕೆಗೆ ಗೊತ್ತಿರಲಿಲ್ಲ. ಆಪ್ತ ಸಮಾಲೋಚನೆ ನಡೆಸಿ, ಬಾಲಕಿ ವಿಳಾಸವನ್ನು ಪತ್ತೆ ಹಚ್ಚಿ ಪೋಷಕರಿಗೆ ಆಕೆಯನ್ನು ಸೇರಿಸಲಾಗಿದೆ ಎಂದಿದ್ದಾರೆ ಎನ್.ಟಿ.ಯೋಗೇಶ, ಜಿಲ್ಲಾಮಕ್ಕಳ ರಕ್ಷಣಾಧಿಕಾರಿ.













