ನ್ಯೂಸ್ ನಾಟೌಟ್: “ಪ್ರಾಚೀನ ಕಾಲದಿಂದಲೇ ಭಾರತವು ವಿಜ್ಞಾನ ಕ್ಷೇತ್ರದಲ್ಲಿ ತನ್ನದೇ ಆದ ಸಾಧನೆ ಮಾಡುತ್ತಾ ಇಡೀ ಜಗತ್ತಿಗೆ ಕೊಡುಗೆ ನೀಡುತ್ತಾ ಬಂದಿದೆ. ವಿಜ್ಞಾನವು ಮಾನವನ ಬುದ್ಧಿವಂತಿಕೆಗೆ ಸವಾಲಾಗಿದೆ. ಅದರಲ್ಲಿ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ. ಹಾಗೆಯೇ ಎಲ್ಲಾ ಪ್ರಶ್ನೆಗಳಿಗೆ ಉತ್ತರವೂ ಇದೆ. ಅನ್ವಯಿಕ ಮತ್ತು ಸೈದ್ಧಾಂತಿಕ ವಿಜ್ಞಾನ ಕ್ಷೇತ್ರಕ್ಕೆ ಭಾರತದ ಕೊಡುಗೆ ಅಪಾರವಾಗಿದೆ” ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರು ಹೇಳಿದರು.
ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ವಿಜ್ಞಾನ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಲಾ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆಯವರು ಮಾತನಾಡಿ “ನಮ್ಮ ಜೀವನದ ಪ್ರತಿಯೊಂದು ಹಂತದಲ್ಲಿಯೂ ವಿಜ್ಞಾನದ ಕೊಡುಗೆ ಅಡಗಿದೆ” ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಲಾ ವಿಜ್ಞಾನ ಶಿಕ್ಷಕಿ ಮಾಲತಿಯವರು ಮಾತನಾಡಿ ” ಭಾರತದ ವಿಜ್ಞಾನಿ ಸಿ ವಿ ರಾಮನ್ ಅವರ ಜನ್ಮದಿನವನ್ನು ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ. ರಾಮನ್ ಪರಿಣಾಮದ ಕೊಡುಗೆಯನ್ನು ಕೊಟ್ಟಿರುವ ಇವರು ಬಡ ಕುಟುಂಬದಲ್ಲಿ ಜನಿಸಿದ್ದರು. ಪ್ರತಿಯೊಬ್ಬನಿಗೂ ಹೊಸತನ್ನು ಸಾಧಿಸುವ ಛಲ ಇರಬೇಕು. ಜೊತೆಗೆ ವೈಜ್ಞಾನಿಕ ಕ್ಷೇತ್ರದ ಸಾಧನೆಗಾಗಿ ಪ್ರಶ್ನೆ ಮಾಡುವ ಮನೋಭಾವನೆ ಬೆಳೆಸಿಕೊಂಡಿರಬೇಕು” ಎಂದು ಹೇಳಿ ರಾಮನ್ ಪರಿಣಾಮ ಪರಿಕಲ್ಪನೆಯನ್ನು ವಿವರಿಸಿದರು.
ಇನ್ನೋರ್ವ ವಿಜ್ಞಾನ ಶಿಕ್ಷಕಿ ಸೌಮ್ಯ ಅವರು ಮಾತನಾಡಿ ” ಛಲವೊಂದಿದ್ದರೆ ಏನನ್ನು ಸಾಧಿಸಬಹುದು ವಿಜ್ಞಾನ ಕ್ಷೇತ್ರದ ಸಾಧನೆಯು ಒಂದೆರಡು ದಿನದ ಸಾಧನೆ ಅಲ್ಲ ಅದು ಹಲವಾರು ವರ್ಷಗಳ ಅವಿರತ ಪರಿಶ್ರಮದ ಫಲವಾಗಿರುತ್ತದೆ. ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿನ ಬೆಳವಣಿಗೆಗಳು ಮಾನವನ ಶ್ರಮವನ್ನು ಕಡಿತಗೊಳಿಸುವ ಕೆಲಸ ಮಾಡುತ್ತಿದೆ” ಎಂದು ಹೇಳಿದರು.
ಶಾಲಾ ವಿದ್ಯಾರ್ಥಿ ವೈಷ್ಣವ್ ಎಂಟನೇ ತರಗತಿ ಇವರು ಮಾತನಾಡಿ ” ಸರ್ ಸಿ ವಿ ರಾಮನ್ ಅವರು ಬಾಲ್ಯದಲ್ಲಿಯೇ ವಿಜ್ಞಾನ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು ಮತ್ತು ಕಾಲೇಜಿನ ಪುಸ್ತಕವನ್ನು ಚಿಕ್ಕವರಿದ್ದಾಗಲೇ ಓದುತ್ತಿದ್ದರು ಅವರಲ್ಲಿದ್ದ ಆಸಕ್ತಿ ಕುತೂಹಲ ಮತ್ತು ಓದುವ ಮನೋಭಾವನೆ ಅವರನ್ನು ಶ್ರೇಷ್ಠ ವ್ಯಕ್ತಿಯನ್ನಾಗಿಸಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ಇನ್ಫಿನಿಟಿ ಗಾರ್ಡ್, ಮಲ್ಟಿಪರ್ಪೋಸ್ ಅಗ್ರಿಕಲ್ಚರಲ್ ಮೆಶಿನ್, ಸ್ಲೀಪ್ ಅಲರಾಂ, ಗ್ರಾಸ್ ಕಟ್ಟರ್, ಆಟೋಮ್ಯಾಟಿಕ್ ಹೆಲ್ಮೆಟ್ ಡ್ರೈವಿಂಗ್, ವಾಟರ್ ಪ್ಯೂರಿಫಿಕೇಶನ್ ಯೂನಿಟ್, ಆಟೋಮ್ಯಾಟಿಕ್ ರೈಲ್ವೆ ಬ್ರಿಡ್ಜ್ , ಲೇಸರ್ ಅಲಾರಾಂ ಸೆಕ್ಯೂರಿಟಿ, ಹೈಡ್ರೋ ಪವರ್ ಪ್ಲಾಂಟ್, ಆಟೋಮ್ಯಾಟಿಕ್ ಸ್ಟ್ರೀಟ್ ಲೈಟ್, ಏರ್ ಕೂಲರ್, ಮೈಕ್ರೋಸ್ಕೋಪ್, ಸ್ಯಾಂಡ್ ಕ್ಲೀನರ್, ಎಲೆಕ್ಟ್ರಿಸಿಟಿ ಜನರೇಟರ್ ಯೂಸಿಂಗ್ ಪ್ಲಾಸ್ಟಿಕ್ ವೇಸ್ಟ್, ಸ್ಮಾರ್ಟ್ ಬ್ಲೈಂಡ್ ಸ್ಟಿಕ್, ಆಟೋಮ್ಯಾಟಿಕ್ ಮಾಸ್ ಕ್ಲೀನರ್, ಸ್ಪೆಲಿಂಗ್ ಟಾಯ್, ಮೊದಲಾದ ಮಾದರಿಗಳ ಕಾರ್ಯ ವೈಖರಿಯನ್ನು ಪ್ರದರ್ಶಿಸಿದರು. 9ನೇ ತರಗತಿಯ ವಿದ್ಯಾರ್ಥಿನಿ ವೈಷ್ಣವಿ ಎಸ್ ಸ್ವಾಗತಿಸಿ, ನಿರೂಪಿಸಿದರು. 9 ನೇ ತರಗತಿ ವಿದ್ಯಾರ್ಥಿ ಭೂಶಿತ್ ಎನ್ ವಿ ವಂದಿಸಿದರು.













