ನ್ಯೂಸ್ ನಾಟೌಟ್: ಲಯನ್ಸ್ ಕ್ಲಬ್ ಸುಳ್ಯ ವಲಯಾಧ್ಯಕ್ಷರ ಭೇಟಿ ಕಾರ್ಯಕ್ರಮ ಫೆ.25ರಂದು ನಡೆಯಿತು. ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಂದ್ರಶೇಖರ ನಂಜೆ – ದಿವ್ಯ ನಂಜೆ ದಂಪತಿಯನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಕಾರ್ಯದರ್ಶಿ ಮಲ್ಲಿಕಾರ್ಜುನ್ ಪ್ರಸಾದ್, ಖಜಾಂಚಿ ಜತ್ತಪ್ಪ ರೈ, ಮಾಜಿ ಅಧ್ಯಕ್ಷ ರಾಮಕೃಷ್ಣ ರೈ, ಜಯರಾಂ ದೇರಪ್ಪಜ್ಜನ ಮನೆ, ರಮಿತಾ ಜಯರಾಂ, ಎಂ.ಬಿ ಸದಾಶಿವ, ವಿನೋದ್ ಲಸ್ರಾದೊ, ಸಂಪಾಜೆ ಲಯನ್ಸ್ ಕ್ಲಬ್ ಅಧ್ಯಕ್ಷ ಕಿಶೋರ್ ಕುಮಾರ್, ಗುತ್ತಿಗಾರು ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರವೀಣ್ ಮುಂಡೋಡಿ, ಸೂಂತೋಡು ಕಾಂಪ್ಲೆಕ್ಸ್ ಮಾಲೀಕ ಸೂರಯ್ಯ ಸೇರಿದಂತೆ ಹಲವಾರು ಮಂದಿ ಪದಾಧಿಕಾರಿಗಳು ಹಾಜರಿದ್ದರು. ಇದೇ ವೇಳೆ ಸೇವಾ ಕಾರ್ಯಕ್ರಮಗಳು ನಡೆದವು.
ಜಯನಗರದ ಅಶಕ್ತ ಕುಟುಂಬದ ಚಂದ್ರಶೇಖರವರ ಮನೆ ದುರಸ್ಥಿಗೆ 10 ಸಾವಿರ ರೂ. ನೀಡಲಾಯಿತು. ನ್ಯೂಸ್ ನಾಟೌಟ್ ಯೂ ಟ್ಯೂಬ್ ಚಾನೆಲ್ ನಲ್ಲಿ ಮೊಟ್ಟ ಮೊದಲ ಬಾರಿಗೆ ಚಂದ್ರಶೇಖರವರ ಕಷ್ಟದ ಬಗ್ಗೆ ವರದಿ ಮಾಡಲಾಗಿತ್ತು. ರಾಜ್ಯದ ಬೇರೆ ಬೇರೆ ಭಾಗದಿಂದ ಆರ್ಥಿಕ ನೆರವು ಹರಿದು ಬಂದಿತ್ತು. ಊರವರ ಸಹಕಾರದೊಂದಿಗೆ ಸದ್ಯ ಅವರ ಮನೆಯನ್ನು ನವೀಕರಿಸುವ ಕಾರ್ಯವೂ ಭರದಿಂದ ಸಾಗುತ್ತಿದೆ. ಸದ್ಯ ಲಯನ್ಸ್ ಕ್ಲಬ್ ಸುಳ್ಯ ಕೂಡ ವರದಿ ಬಳಿಕ ಚಂದ್ರಶೇಖರ್ ಅವರಿಗೆ ಸಹಾಯ ಮಾಡಿ ಮಾನವೀಯತೆ ಮೆರೆದಿದೆ.
ಅಲ್ಲದೆ ಅರಂತೋಡು ಘನ ತ್ಯಾಜ್ಯ ವಿಲೇವಾರಿ ಘಟಕದ ಮರು ನಿರ್ಮಾಣಕ್ಕೆ ರೂ. 5 ಸಾವಿರ, ಸಮಾಜ ಸೇವಕ ಈಶ್ವರ್ ಮಲ್ಪೆಯವರ ಜೀವನ ಚರಿತ್ರೆ ಪುಸ್ತಕ ಪ್ರಿಂಟ್ ಮಾಡುವುದಕ್ಕೆ ಹಾಗೂ ಪ್ರಜ್ಞಾ ವೃದ್ದಾಶ್ರಮಕ್ಕೆ ಕ್ರಮವಾಗಿ 10 ಸಾವಿರ ರೂ., ನೀಡಲಾಯಿತು. ಸಬ್ ರಿಜಸ್ಟ್ರರ್ ಆಫೀಸ್ ಗೆ ವೀಲ್ ಚೇರ್ ಕೊಡುಗೆ ನೀಡಲಾಯಿತು. ಈ ಸಮಾಜ ಸೇವಾ ಕಾರ್ಯಕ್ರಮಕ್ಕೆ ಲಯನ್ಸ್ ಕ್ಲಬ್ ನ ಎಲ್ಲ ಸದಸ್ಯರು ಸಹಕರಿಸಿದ್ದಾರೆ.













