ನ್ಯೂಸ್ ನಾಟೌಟ್ : ಕನ್ನಡ ಅಭಿವೃದ್ಧಿ ಪ್ರಾಧಿಕಾರ, ವಿಧಾನಸೌಧ, ಬೆಂಗಳೂರು ಮತ್ತು ಹಿರಿಯ ವಿದ್ಯಾರ್ಥಿ ಸಂಘ ನೆಹರೂ ಮೆಮೋರಿಯಲ್ ಕಾಲೇಜು, ಸುಳ್ಯ ಸುವರ್ಣ ಮಹೋತ್ಸವ ಸಂಭ್ರಮಾಚಾರಣೆ ಪ್ರಯುಕ್ತ ಒಂದು ದಿನದ ವಿಚಾರ ಗೋಷ್ಠಿ ನೆಹರೂ ಮೆಮೋರಿಯರ್ ಕಾಲೇಜಿನ ಸಭಾಭವನದಲ್ಲಿ ಬುಧವಾರ (ಫೆ. 25 ) ನಡೆಯಿತು.


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ, ಕನ್ನಡ ಸಬಲೀಕರಣ ಯೋಜನೆಯಲ್ಲಿ ಇಂತಹ ವಿಚಾರಗೋಷ್ಠಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಭಾರತ ಏಕ ಭಾಷೆಯ ಕಡೆಗೆ ಮುಖ ಮಾಡಿದರೆ ಅದು ಬಣ್ಣವಿಲ್ಲದ ರಂಗೋಲಿಯಂತಾಗುತ್ತದೆ. ಪ್ರತಿ ಭಾಷೆಯಲ್ಲೂ ಭಾರತವಿದೆ. ಕನ್ನಡವು ಏಕ ಭಾಷೆಯಲ್ಲ; ಅನೇಕ ಸಣ್ಣ ಭಾಷೆಗಳು ಮತ್ತು ಉಪಭಾಷೆಗಳು ಸೇರಿಕೊಂಡಾಗಲೇ ಅದು ಸಮೃದ್ಧವಾಗಿದೆ. ಎಲ್ಲಾ ಭಾಷೆಗಳು ಸೇರಿದಾಗಲೇ ಕನ್ನಡ ಇನ್ನಷ್ಟು ಸುಂದರವಾಗುತ್ತದೆ. ಎಲ್ಲಾ ಭಾಷೆಗಳನ್ನು ಉಳಿಸಿ ನಮ್ಮ ಭಾಷೆಯನ್ನು ಪ್ರೀತಿಸೋಣ; ಭಾಷಾಂಧತೆ ಬೇಡ, ಭಾಷಾ ಪ್ರೇಮ ಇರಲಿ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ ಸಂತೋಷ್ ಹಾನಗಲ್ ಮಾತನಾಡಿ, ಕನ್ನಡವು ಕೇವಲ ಒಂದು ಭಾಷೆಯಲ್ಲ; ಅದು ನಮ್ಮ ನೆಲದ ಸಂಸ್ಕೃತಿ. ಇತಿಹಾಸ ಮತ್ತು ಜನಜೀವನದ ಪ್ರತಿಬಿಂಬ. ಅನೇಕ ಸಣ್ಣ ಭಾಷೆಗಳು, ಉಪಭಾಷೆಗಳು ಮತ್ತು ಜನಪದ ವೈಶಿಷ್ಟ್ಯಗಳನ್ನು ಒಳಗೊಂಡು ಬೆಳೆದ ಸಮೃದ್ಧ ಭಾಷೆ ಕನ್ನಡ. ಪ್ರತಿ ಭಾಷೆಯ ಗೌರವವನ್ನು ಉಳಿಸಿಕೊಂಡಾಗಲೇ ಕನ್ನಡ ಇನ್ನಷ್ಟು ಬಲಿಷ್ಠವಾಗುತ್ತದೆ. ಭಾಷೆ ನಮ್ಮ ಗುರುತು; ಅದನ್ನು ಪ್ರೀತಿಸಿ, ಬಳಸಿ, ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ್ ಪೇರಾಲು, ಪ್ರಾಂಶುಪಾಲ ಡಾ ರುದ್ರಕುಮಾರ್ ಎಂ.ಎಂ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಕೆ.ಟಿ ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ಮಧುರಾ ಜಗದೀಶ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಭಾಷಾ ಗೋಷ್ಠಿ ಪ್ರಾರಂಭಗೊಂಡಿತು. ವಿವಿಧ ಭಾಷೆಯಲ್ಲಿ ವಿಚಾರವನ್ನು ಮಂಡಿಸಲು ಸಂಪನ್ಮೂಲಗಳು ವ್ಯಕ್ತಿಗಳಾಗಿ
ಅರೆ ಭಾಷೆಯಲ್ಲಿ ಕವಯತ್ರಿ ಮತ್ತು ಬರಹಗಾರರು, ಸ್ಥಿತಾ ಅಮೃತರಾಜ್, ಚೆಂಬು, ಕೊಡಗು ತುಳು ಭಾಷೆಯಲ್ಲಿ ವಿಶ್ರಾಂತ ಪ್ರಾಂಶುಪಾಲರು ಮತ್ತು ಬರಹಗಾರರಾದ ‘ಡಾ. ಪೂವಪ್ಪ ಕಣಿಯೂರು, ಸುಳ್ಯ ಕೊರಗ ಭಾಷೆಯಲ್ಲಿ ಕೊರಳ್ ಕಲಾ ತಂಡ, ಅಧ್ಯಕ್ಷರಾದ ರಮೇಶ್ ಮಂಚಕಲ್ಲು,ಮಂಗಳೂರು, ಹವ್ಯಕ ಭಾಷೆಯಲ್ಲಿ ಕೃಷಿಕ ಮಹಿಳೆ ಮತ್ತು ಬರಹಗಾರ್ತಿ, ಸಹನಾ ಕಾಂತಬೈಲು,ಕೊಡಗು, ಮಲೆಯಾಳಿ ಭಾಷೆಯಲ್ಲಿ ಅಧ್ಯಾಪಕರು ಮತ್ತು ಬರಹಗಾರರು, ಡಾ. ಸುಂದರ ಕೇನಾಜೆ, ಸುಳ್ಯ, ಬ್ಯಾರಿ ಭಾಷೆಯಲ್ಲಿ ಬರಹಗಾರರು, ಇಸ್ಮತ್ ಪಜೀರ್ ಮಂಗಳೂರು, ಕೊಂಕಣಿ ಭಾಷೆಯಲ್ಲಿ ಪಶು ವೈದ್ಯಾಧಿಕಾರಿ, ಡಾ. ನಿತಿನ್ ಪ್ರಭು, ಸುಳ್ಯ, ತಮಿಳು ಭಾಷೆಯಲ್ಲಿ ಬರಹಗಾರರು, ಡಾ. ಸೆಲ್ವರತ್ನಂ ಕಂದಡ್ಕ ಬೆಂಗಳೂರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಡಾ.ರುದ್ರ ಕುಮಾರ್ ಎಂ. ಎಂ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಉಪನ್ಯಾಸಕರಾದ ಡಾ ಅನುರಾಧ ಕುರುಂಜಿ ಹಾಗೂ ಬೇಬಿ ವಿದ್ಯಾ ಪಿಬಿ ಕಾರ್ಯಕ್ರಮ ನಿರೂಪಿಸಿ ನಿರ್ವಹಿಸಿದರು. ಮಧುರಾ ಜಗದೀಶ್ ವಂದಿಸಿದರು. ಹಿರಿಯ ವಿಮರ್ಶಕರು ಎಸ್ ಆರ್ ವಿಜಯಶಂಕರ್, ಬೆಂಗಳೂರು ಸಮಾರೋಪ ನುಡಿಗಳನ್ನಡಲಿದ್ದಾರೆ. ಕಾರ್ಯಕ್ರಮದಲ್ಲಿ ಕನ್ನಡ ತಜ್ಞರು, ಸಾಹಿತಿಗಳು, ಚಿಂತನಕಾರರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.













