ನ್ಯೂಸ್ ನಾಟೌಟ್ : ಬಿಗ್ಬಾಸ್ ರನ್ನರ್ ಅಪ್ ರಕ್ಷಿತಾ ಶೆಟ್ಟಿ ಅವರಿಗೆ ಹುಟ್ಟೂರಿನಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ. ಮೆರವಣಿಗೆ ಸಂದರ್ಭದಲ್ಲಿ ಕೈಯಲ್ಲಿ ಬಂಗುಡೆ ಮೀನು ಹಿಡಿದು ರಕ್ಷಿತಾ ಶೆಟ್ಟಿ ಸಂಭ್ರಮಿಸಿದ್ದಾರೆ.
ಹೆಜಮಾಡಿ ಟೋಲ್ನಿಂದ ಪಡುಬಿದ್ರೆಯವರೆಗೆ (Padubidri) ರಕ್ಷಿತಾ ಶೆಟ್ಟಿ ಅವರನ್ನು ಮೆರವಣಿಗೆಯೊಂದಿಗೆ ಕರೆ ತಂದಿದ್ದಾರೆ. ತೆರೆದ ವಾಹನ ಏರಿದ ರಕ್ಷಿತಾ ಅವರು ಅಭಿಮಾನಿಗಳಿಗೆ ಕೈ ಬೀಸಿದ್ದಾರೆ.
ರಕ್ಷಿತ ಶೆಟ್ಟಿ ಅವರಿಗೆ ಬಂಗುಡೆ ಮತ್ತು ಭೂತಾಯಿ ಮೀನು ಎಂದರೆ ಬಹಳ ಅಚ್ಚುಮೆಚ್ಚು. ತಮ್ಮ ವ್ಲಾಗ್ನಲ್ಲೂ ಅವರು ಮೀನಿನ ಖಾದ್ಯದ ಬಗ್ಗೆ ವಿಡಿಯೋ ಮಾಡುತ್ತಿದ್ದರು. ಮೀನು ಮಾರುಕಟ್ಟೆ ಹೋಗಿ ಮಹಿಳೆಯರ ಜೊತೆ ಸಂಭಾಷಣೆ ಮಾಡುತ್ತಿದ್ದರು. ಬಿಗ್ ಬಾಸ್ ಮನೆಯಲ್ಲೂ ಮೀನುಗಾರರನ್ನು ಕರೆಸಿ ಅವರ ಜೀವನದ ಬಗ್ಗೆ ಕರ್ನಾಟಕದ ಜನರಿಗೆ ತಿಳಿಸಬೇಕೆಂದು ಬೇಡಿಕೆ ಇಟ್ಟಿದ್ದರು. ಈ ಕಾರಣಕ್ಕೆ ಅಭಿಮಾನಿಯೊಬ್ಬರು ರಕ್ಷಿತಾ ಕೈಗೆ ಮೀನು ಕೊಟ್ಟಿದ್ದರು.
ರಕ್ಷಿತಾ ಬರುವ ವಿಚಾರ ತಿಳಿದು ನೂರಾರು ಜನ ಹೆಜಮಾಡಿ ಟೋಲ್ನಲ್ಲಿ ಸೇರಿದ್ದರು. ನಂತರ ರಕ್ಷಿತಾ ಅವರ ವಾಹನದ ಜೊತೆಗೆ ಅಭಿಮಾನಿಗಳು ಹೆಜ್ಜೆ ಹಾಕಿದರು.













