ನ್ಯೂಸ್ ನಾಟೌಟ್ : ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಎದುರು ನಡೆಯುತ್ತಿರುವ ಉತ್ಖನನ ಕಾರ್ಯ ಇವತ್ತೂ ಕೂಡ ಮುಂದುವರಿದಿದೆ. ನಿನ್ನೆ ಶಿವಲಿಂಗ ಪತ್ತೆಯಾಗಿತ್ತು, ಇವತ್ತು ಹಿತ್ತಾಳೆ ಗಂಟೆ ಪತ್ತೆಯಾಗಿದೆ. ಪ್ರಾಚೀನ ಕಾಲದ ಹಿತ್ತಾಳೆ ಗಂಟೆ ಇದಾಗಿದ್ದು, ದೇಗುಲದ ಜಾಗವು ರಹಸ್ಯಗಳನ್ನ ಹೊದ್ದು ನಿಂತಂತೆ ಕಾಣ್ತಿದೆ.
ನಾಲ್ಕನೇ ದಿನವೂ ಉತ್ಖನನ ಕಾರ್ಯ ಮುಂದುವರಿದಿದೆ. ರಾಜ್ಯ ಪುರಾತತ್ವ ಇಲಾಖೆ ಹಾಗೂ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕಾರ್ಯ ನಡೆಯುತ್ತಿದೆ. ಸತತ ಮೂರು ದಿನದ ಉತ್ಖನನದಲ್ಲಿ ಕೆಲವು ಅವಶೇಷಗಳು ಪತ್ತೆಯಾಗಿದ್ದವು.
ಏನೆಲ್ಲ ಪತ್ತೆ..?
- ಶಿವಲಿಂಗ ಆಕಾರದ ಐತಿಹಾಸಿಕ ಕಲ್ಲು
- ಕೆಲವು ಮಡಿಕೆ ಚೂರುಗಳು ಪತ್ತೆ
- ಲೋಹದ ಚಿಕ್ಕ ಶಿವಲಿಂಗ
- ಕಲ್ಲಿನಲ್ಲಿ ಕೆತ್ತಿದ ಹೆಡೆ ಎತ್ತಿದ್ದ ನಾಗರಹಾವಿನ ಚಿತ್ರವಿರು ಕಲ್ಲು
- ಹಲವು ಕಲ್ಲಿನ ಅವಶೇಷಗಳು ಪತ್ತೆ
- ಇವತ್ತು ಹಿತ್ತಾಳೆ ಗಂಟೆ
ವೀರಭದ್ರೇಶ್ವರ ದೇವಸ್ಥಾನದ ಆವರಣದ 10/10 ಅಡಿಯ ಸುತ್ತಳತೆಯಲ್ಲಿ ಉತ್ಖನನ ಕಾರ್ಯ ನಡೆಯುತ್ತಿದೆ. ನಿನ್ನೆವರೆಗೂ ಸುಮಾರು 3 ಅಡಿ ಆಳದವರೆಗೆ ಮಣ್ಣನ್ನು ಕಾರ್ಮಿಕರು ಅಗೆದಿದ್ದಾರೆ. ಇನ್ನೂ ಸುಮಾರು 7-8 ಅಡಿ ಆಳ ಅಗೆದರೆ ಏನಾದರೂ ಅವಶೇಷಗಳು, ಚಿನ್ನದ ನಿಧಿ ಸಿಗಬಹುದು ಎಂಬ ನಿರೀಕ್ಷೆಗಳು ಇದೆ. ಕಾಳಿಂಗ ಸರ್ಪ ಪ್ರತ್ಯಕ್ಷ ಹಿನ್ನೆಲೆಯಲ್ಲಿ ಸ್ಥಳೀಯರು, ಕಾರ್ಮಿಕರು ಭಯಭೀತರಾಗಿದ್ದಾರೆ.













