ನ್ಯೂಸ್ ನಾಟೌಟ್ : ಇತ್ತೀಚಿನ ದಿನಗಳಲ್ಲಿ ಸೈಬರ್ ಕಳ್ಳತನ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಿವೆ. ಅಪರಿಚಿತರು ಓಟಿಪಿ ಕೇಳುವುದು ಕೊಟ್ಟ ತಕ್ಷಣ ಬ್ಯಾಂಕ್ ಖಾತೆಯಿಂದ ಹಣ ಮಂಗಮಾಯವಾಗಿ ಹಲವರು ಹಣ ಕಳೆದುಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿರುವ ವಿಚಾರ ದೊಡ್ಡ ಸದ್ದು ಮಾಡುತ್ತಿದೆ. ಇಂತಹ ಹೊತ್ತಿನಲ್ಲಿ ರಾಜ್ಯ ಸರ್ಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025 ಆರಂಭಿಸಿದೆ. ಇದರ ಹಿಂದಿನ ಉದ್ದೇಶ ಒಳ್ಳೆಯದಿರಬಹುದು. ಆದರೆ ಇದು ಮಿಸ್ ಯೂಸ್ ಆಗುವ ಅಪಾಯಗಳಿವೆ. ಈ ಬಗ್ಗೆ ಹಲವಾರು ಮಂದಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಮಿಸ್ ಯೂಸ್ ಸಾಧ್ಯತೆ ಹೇಗೆ..?
ಸಮೀಕ್ಷೆಗೆ ಬರುವ ಸರ್ಕಾರಿ ನೇಮಿತ ಪ್ರತಿನಿಧಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಸಹಿ ಇರುವ ಒಂದು ಗುರುತಿನ ಚೀಟಿ ನೀಡಲಾಗಿದೆ. ಆ ಗುರುತಿನ ಚೀಟಿಯಲ್ಲಿ ಯಾವುದೇ ಸರ್ಕಾರಿ ಮುದ್ರಿತ ಸೀಲ್ ಗಳು ಇಲ್ಲ. ಒಂದು ಖಾಲಿ ಹಾಳೆಯಲ್ಲಿ ಪೆನ್ನಿನಲ್ಲಿ ಬರೆದು, ಫೋಟೋ ಅಂಟಿಸಿ ಜಿಲ್ಲಾಧಿಕಾರಿಗಳ ಸಹಿ ಮಾತ್ರ ಕಾಣುತ್ತದೆ. ಅದಕ್ಕೆ ಲ್ಯಾಮಿನೇಷನ್ ಮಾತ್ರ ಮಾಡಲಾಗಿದೆ. ಇದನ್ನು ಸೀದಾ ಸಾದವಾಗಿ ನಂಬಿ ಮನೆಗೆ ಬಂದವರಿಗೆ ನಮ್ಮ ಓಟಿಪಿ ಅಥವಾ ಇನ್ನ್ಯಾವುದೋ ದಾಖಲಾತಿಗಳನ್ನು ನೀಡುವುದು ಹೇಗೆ..? ಸೈಬರ್ ಕಳ್ಳರು ಸಮೀಕ್ಷೆ ಹೆಸರಿನಲ್ಲಿ ಒಟಿಪಿ ಮಾಹಿತಿ ಕಲೆ ಹಾಕಿ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುವ ಸಾಧ್ಯತೆ ಇರುತ್ತದೆ. ಹೀಗಾಗಿ ಜಿಲ್ಲಾಡಳಿತ ಇಲ್ಲವೇ ಆಯಾ ತಾಲೂಕಿನ ತಹಶೀಲ್ದಾರ್ ಅವರು ತಮ್ಮ ಕಚೇರಿಯ ಅಧಿಕೃತ ಸೀಲ್ ಗಳನ್ನು ಸಮೀಕ್ಷೆಗೆ ನೇಮಕವಾಗಿರುವ ಪ್ರತಿನಿಧಿಗಳಿಗೆ ನೀಡಿದರೆ ಮುಂದಿನ ಅಪಾಯವನ್ನು ತಡೆಯಬಹುದು. ಮಾತ್ರವಲ್ಲ ಸಮೀಕ್ಷೆಗೆ ನೇಮಕವಾಗಿರುವ ಪ್ರತಿನಿಧಿಗಳಿಗೂ ಸಹಾಯವಾಗಬಹುದು. ಅವರನ್ನು ಅನುಮಾನ ಪಡದೆ ನಾವು ನಮ್ಮ ದಾಖಲೆಗಳನ್ನು ಹಾಗೂ ಒಟಿಪಿಗಳನ್ನು ನೀಡಬಹುದಾಗಿದೆ.













