ನ್ಯೂಸ್ ನಾಟೌಟ್: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS), ಕರ್ನಾಟಕ ಇವರ ಸಹಯೋಗದಲ್ಲಿ, ಕೆವಿಜಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಸುಳ್ಯ ಇವರ ಆಶ್ರಯದಲ್ಲಿ ಆರ್ಜಿಯುಎಚ್ಎಸ್ ಮಂಗಳೂರು ವಲಯದ ಪುರುಷರ ಹಗ್ಗಜಗ್ಗಾಟ ಸ್ಪರ್ಧೆಯ ಉದ್ಘಾಟನೆ ಕೆವಿಜಿ ಕ್ಯಾಂಪಸ್ ನಲ್ಲಿ 19ರಂದು ನೆರವೇರಿತು.
ಸಮಾರಂಭದ ಅಧ್ಯಕ್ಷತೆಯನ್ನು ಎ.ಒ.ಎಲ್.ಇ(ರಿ.) ಸುಳ್ಯ ಇದರ ಅಧ್ಯಕ್ಷರು ಹಾಗೂ ವೈದ್ಯಕೀಯ ನಿರ್ದೇಶಕರಾದ ಡಾ ಕೆ.ವಿ ಚಿದಾನಂದ ವಹಿಸಿ ಮಾತನಾಡಿ “ಹಗ್ಗ ಜಗ್ಗಾಟ ಸ್ಪರ್ಧೆ ಒಂದು ಯುಕ್ತಿ ಮತ್ತೆ ಶಕ್ತಿಯ ಸ್ಪರ್ಧೆ, ಸ್ಪರ್ಧೆಯಲ್ಲಿ ಸೋಲು ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ” ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್, ಬೆಳ್ಳಾರೆ ಇದರ ಸಂಸ್ಥಾಪಕರು ಹಾಗೂ ಅಧ್ಯಕ್ಷರು, ಎಂ.ಪಿ. ಉಮೇಶ್ ಮಾತನಾಡಿ, “ವೈದ್ಯಕೀಯ ಶಿಕ್ಷಣದಲ್ಲಿ ಎಂದರೆ ನಿರಂತರ ಅಧ್ಯಯನ ದೀರ್ಘ ಕಾಲದ ತರಗತಿ ಹಾಗಾಗಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮಾನಸಿಕ ಹಾಗೂ ದೈಹಿಕ ದೃಢತೆಯನ್ನು ಹೆಚ್ಚಿಸಿಕೊಳ್ಳಲು ಕ್ರೀಡೆ ಸಹಕಾರಿ, ಕ್ರೀಡೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಾಗ ನಾಯಕತ್ವ ಗುಣ ಶಿಸ್ತು ಹಾಗೂ ಸಮಯಪಾಲನೆ ಬೆಳೆಯುತ್ತದೆ” ಎಂದರು. ಕಾಲೇಜಿನ ಡೀನ್ ಡಾ ನೀಲಾಂಬಿಕೈ ನಟರಾಜನ್ ಮಾತನಾಡಿ ಕ್ರೀಡೋತ್ಸವಕ್ಕೆ ಶುಭ ಹಾರೈಸಿದರು.
ಅತಿಥಿಗಳಾಗಿ ಎ.ಒ.ಎಲ್.ಇ (ರಿ.) ಸುಳ್ಯ ಇದರ ಉಪಾಧ್ಯಕ್ಷೆ ಶೋಭಾ ಚಿದಾನಂದ,ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರು,ಹಾಗೂ ವಲಯ ಸಂಯೋಜಕರಾದ ಚಂದ್ರಶೇಖರ ಎಸ್.ಎನ್. ಫಿಸಿಯಾಜಿ ವಿಭಾಗದ ಪ್ರೊಫೆಸರ್ ಹಾಗೂ ಕ್ರೀಡಾ ಸಂಯೋಜಕರಾದ ಡಾ ದಾಮೋದರ್ ಡಿ ಹಾಗೂ ರಿಜಿಸ್ಟ್ರಾರ್ ಡಾ ಸಂದೇಶ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಗಣ್ಯರು ಕ್ರೀಡಾಂಗಣಕ್ಕೆ ತೆರಳಿ ತೆಂಗಿನಕಾಯಿ ಒಡೆಯುವುದರೊಂದಿಗೆ ಸ್ಪರ್ಧೆಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ನಿಕ್ಷೇಪ್ ಪ್ರಾರ್ಥಿಸಿದರು,ಡಾ ಪ್ರೀತಿರಾಜ್ ಬಲ್ಲಾಳ್ ಸ್ವಾಗತಿಸಿದರು, ಡಾ ಅಂಜಲಿ ರಾವ್ ವಂದಿಸಿದರು. ವೈದ್ಯಕೀಯ ವಿದ್ಯಾರ್ಥಿಗಳಾದ ಉತ್ತಮ್ ಹಾಗೂ ಸಹನಾ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸಹ ಸಂಸ್ಥೆಗಳ ಪ್ರಾಂಶುಪಾಲರು, ವಿಭಾಗ ಮುಖ್ಯಸ್ಥರು, ಪ್ರಾಧ್ಯಾಪಕರು, ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ವಲಯದ ವಿವಿಧ ವೈದ್ಯಕೀಯ ಮಹಾವಿದ್ಯಾಲಯಗಳಿಂದ ಅನೇಕ ತಂಡಗಳು ಆಗಮಿಸಿದ್ದವು. ದೈಹಿಕ ಶಿಕ್ಷಣ ನಿರ್ದೇಶಕರಾದ ಮಿಥನ್, ನಾಗರಾಜ್ ನಾಯಕ್, ಲೆಫ್ಟಿನೆಂಟ್ ಸೀತಾರಾಮ್ ಎಮ್ ಉಪಸ್ಥಿತರಿದ್ದು ಕಾರ್ಯಕ್ರಮ ನಿರ್ವಹಿಸಿದರು.













