ನ್ಯೂಸ್ ನಾಟೌಟ್ : ಪ್ರೀತಿಯ ನಾಟಕವಾಡಿ ಮದುವೆಯಾಗುವುದಾಗಿ ನಂಬಿಸಿ ಯುವತಿ ಜತೆ ದೈಹಿಕ ಸಂಪರ್ಕ ಬೆಳೆಸಿ ಬಳಿಕ ಕೈಕೊಟ್ಟ ಪುತ್ತೂರಿನ ಬಿಜೆಪಿ ಮುಖಂಡನ ಪುತ್ರ ಶ್ರೀಕೃಷ್ಣ ಜೆ. ರಾವ್ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ವರದಿಯೊಂದು ಲಭ್ಯವಾಗಿದೆ.
ಅತ್ಯಾಚಾರ, ವಂಚನೆಗೆ ಒಳಗಾದ ಸಹಪಾಠಿ ವಿದ್ಯಾರ್ಥಿನಿ ಜನ್ಮ ನೀಡಿರುವ ಮಗುವಿನ ಡಿಎನ್ ಎ ಪರೀಕ್ಷೆ ನಡೆಸಲು ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಇದೀಗ ಅದರ ಫಲಿತಾಂಶ ಬಂದಿದ್ದು, ಮಗು ಮತ್ತು ಆರೋಪಿಯ ಕೃಷ್ಣ ಜೆ. ರಾವ್ ಡಿಎನ್ಎ ಹೊಂದಾಣಿಕೆಯಾಗಿದ್ದು, ಆತನೇ ಮಗುವಿನ ತಂದೆ ಎಂಬ ಸತ್ಯವನ್ನು ಡಿಎನ್ಎ ವರದಿ ಬಹಿರಂಗಪಡಿಸಿದೆ.
ಈ ಬಗ್ಗೆ ಪುತ್ತೂರಿನಲ್ಲಿ ಕೆ.ಪಿ. ನಂಜುಂಡಿ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಶ್ರೀ ಕೃಷ್ಣ ರಾವ್ ಎಂಬಾತನೆ ಮಗುವಿನ ತಂದೆ ಎಂಬುವುದು ದೃಢಪಟ್ಟಾಗಿದೆ. ಇನ್ನಾದರೂ ನೊಂದ ಮಗುವಿಗೆ ತಂದೆಯ ಪ್ರೀತಿ ಸಿಗಲಿ. ಎರಡೂ ಕುಟುಂಬದವರೂ ಒಟ್ಟಾಗಿ ಸೇರಿ ಇಬ್ಬರನ್ನೂ ಸತಿ-ಪತಿಯನ್ನಾಗಿ ಮಾಡುವಂತಾಗಲಿ. ನೊಂದ ಹೆಣ್ಣು ಮಗುವಿಗೆ ನ್ಯಾಯ ಸಿಗಲಿ. ಇದಕ್ಕೆ ಎಲ್ಲರ ಸಹಕಾರ ಬೇಕಾಗಿದೆ ಎಂದು ಮನವಿ ಮಾಡಿದರು.













