ನ್ಯೂಸ್ ನಾಟೌಟ್ : ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಸುಳ್ಯದ ಸಾಹಿತಿ ನಿರಂಜನರ ಜನ್ಮ ಶತಮಾನೋತ್ಸವದ ಪ್ರಯುಕ್ತ “ನಿರಂಜನ ಬದುಕು – ಬರಹ: ನೆನಪು” ಕಾರ್ಯಕ್ರಮವನ್ನು ಕಾಲೇಜಿನ ಕನ್ನಡ ಸಂಘ ಹಾಗೂ ಕನ್ನಡ ವಿಭಾಗದ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ಹಾಗೂ ಕಾಲೇಜಿನ ಐಕ್ಯೂಎಸಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಕೆನರಾ ಬ್ಯಾಂಕಿನ ನಿವೃತ್ತ ಜನರಲ್ ಮ್ಯಾನೇಜರ್ ವೆಂಕಟೇಶ್ ಕೆ ಪ್ರಭು ಉದ್ಘಾಟಿಸಿ ಸಾಹಿತ್ಯ ಕ್ಷೇತ್ರದ ಮೂಲಕ ಸುಳ್ಯವನ್ನು ಜಗತ್ತಿಗೆ ಪರಿಚಯಿಸಿದನ್ನು, ಅವರ ಮನೆಯವರಿಗೂ ನಿರಂಜನರಿಗೂ ಇದ್ದ ನಂಟನ್ನು ನೆನಪಿಸಿಕೊಂಡರು. ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ ಎಂ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯ ದಿಗ್ಗಜ ನಿರಂಜನರು ಸುಳ್ಯದವರು ಎನ್ನುವುದು ಸುಳ್ಯದ ಹೆಮ್ಮೆ ಎಂದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ನಿವೃ,ತ್ತ ಪ್ರಾಂಶುಪಾಲ ಅಶೋಕ ಕುಮಾರ್ ಮೂಲೆಮಜಲು ಅವರು ನಿರಂಜನರ ಬದುಕು- ಬರಹ : ನೆನಪು ವಿಷಯದ ಕುರಿತು ಮಾತನಾಡಿ “ ಸಮಾಜದ ಕಟು ಸತ್ಯಗಳನ್ನು ಅಕ್ಷರ ರೂಪಿಕ್ಕಿಳಿಸಿದುದಲ್ಲದೇ ತನ್ನ ಜೀವನವನ್ನೇ ಸಾಹಿತ್ಯವಾಗಿಸಿದವರು ಎಂದು ವಿಮರ್ಶಿಸಿದರು.
ವಿದ್ಯಾರ್ಥಿಗಳಿಂದ ನಡೆದ ನಿರಂಜನರ ಸಾಹಿತ್ಯ ವಿಮರ್ಶೆಯಲ್ಲಿ , ನೆಹರೂ ಮೆಮೋರಿಯಲ್ ಕಾಲೇಜಿನ ಅಂಬಿಕಾ ಎಂ ವಿ ರಂಗಮ್ಮನ ವಠಾರ ಕಾದಂಬರಿಯ ಕುರಿತು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯದ ಭಾಗ್ಯಶ್ರೀ ಕೆ. ಡಿ ಕೊನೆಯ ಗಿರಾಕಿ ಕಥೆಯ ಕುರಿತು, ಬೆಳ್ಳಾರೆಯ ಡಾ. ಕೆ ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನ ಆಜ್ಞಾಶ್ರೀ ರೈ ಡಿ ಚಿರಸ್ಮರಣೆ ಕಾದಂಬರಿಯ ಕುರಿತು, ಕೆ ಎಸ್ ಎಸ್ ಪದವಿ ಕಾಲೇಜು ಸುಬ್ರಹ್ಮಣ್ಯದ ಕು. ಸಂಖ್ಯಾ ಜಿ ಸಿ ಕಲ್ಯಾಣ ಸ್ವಾಮಿ ಕಾದಂಬರಿಯ ಕುರಿತು ಪ್ರಬಂಧ ಮಂಡಿಸಿದರು. ಸುಳ್ಯದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಕಾಲೇಜಿನ ಆಡಳಿತಾಧಿಕಾರಿಗಳು ಆದ ಚಂದ್ರಶೇಖರ ಪೇರಾಲು, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ ಡಿ, ಐಕ್ಯೂಎಸಿ ಸಂಚಾಲಕಿ ಡಾ. ಮಮತಾ ಕೆ. ಕನ್ನಡ ವಿಭಾಗದ ಮುಖ್ಯಸ್ಥ ಸಂಜೀವ ಕುದ್ಪಾಜೆ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭ ಅಗಲಿದ ಮೇರು ಸಾಹಿತಿ ಎಸ್ ಎಲ್ ಬೈರಪ್ಪರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾಲೇಜಿನ ಕನ್ನಡ ಸಂಘದ ಸಂಚಾಲಕರು, ಕಾರ್ಯಕ್ರಮ ಸಂಯೋಜಕರೂ ಆದ ಡಾ. ಅನುರಾಧಾ ಕುರುಂಜಿಯವರು ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿಗಳಾದ ಅಭಿಷೇಕ್, ಕವನ ಅವರ ಕನ್ನಡ ಗೀತಾ ಗಾಯನದೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಧನ್ಯಶ್ರೀ ಸ್ವಾಗತಿಸಿ, ಲಿಖಿತಾ ವಂದಿಸಿ, ಯಶಿತಾ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿಗಳು, ಬೋಧಕ ಬೋಧಕೇತರ ವೃಂದದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಯಶಿತಾ, ಚಸ್ಮಿತಾ, ರಕ್ಷಿತಾ, ನೈನಾ, ಶ್ರೀಷ್ಮಾ, ಅಭಿಷೇಕ್, ಅಂಬಿಕಾ ಸಹಕರಿಸಿದರು.













