ನ್ಯೂಸ್ ನಾಟೌಟ್ : ಕ್ಯಾಫ್ಟನ್ ಜೊತೆ ಕಾಳಗ ನಡೆಸಿ ದಂತ ಮುರಿದುಕೊಂಡು ಸ್ವಲ್ಪ ದಿನಗಳ ಕಾಲ ಮಂಕಾಗಿದ್ದ ಭೀಮ (Elephant Bhima) ಮತ್ತೆ ಫುಲ್ ಆಕ್ಟೀವ್ ಆಗಿದ್ದಾನೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ವಾಟೇಹಳ್ಳಿ ಬಳಿ ಭೀಮ ಕಾಣಿಸಿಕೊಂಡಿದ್ದಾನೆ. ಸ್ವಲ್ಪ ದಿನ ಕಾಡಿನಲ್ಲಿದ್ದ ಭೀಮ ಮತ್ತೆ ಗ್ರಾಮಗಳಿಗೆ ಎಂಟ್ರಿ ಕೊಡುತ್ತಿದ್ದಾನೆ. ಅಲ್ಲದೇ ಗ್ರಾಮದ ಕಾಫಿ ತೋಟವೊಂದರ ಸೋಲರ್ ಬೇಲೆ ಮೇಲೆ ವಿದ್ಯುತ್ ಶಾಕ್ ಹೊಡೆಯದಂತೆ ಮರ ಬೀಳಿಸಿ ದಾಟಿ ಹೋಗಿದ್ದಾನೆ.
ಜನನಿಬಿಡ ಪ್ರದೇಶದಲ್ಲಿ ಭೀಮನ ಓಡಾಟ ಹೆಚ್ಚಾಗಿದೆ. ಕಾಡಾನೆಯ ವಿಡಿಯೋ ಮಾಡಲು ಯುವಕರು ಮುಗಿಬೀಳುತ್ತಿದ್ದಾರೆ. ಭೀಮನ ಚಲನವಲನ ಗಮನಿಸಿ ಗ್ರಾಮಸ್ಥರಿಗೆ ಇಟಿಎಫ್ ಸಿಬ್ಬಂದಿ ಮಾಹಿತಿ ನೀಡುತ್ತಿದ್ದಾರೆ.
ನ.9 ರಂದು ಜಗಬೋರನಹಳ್ಳಿ ಗ್ರಾಮದ ಬಳಿ ಭೀಮ ಹಾಗೂ ಕ್ಯಾಪ್ಟನ್ ಎದುರಾಗಿ ಭೀಕರ ಕಾಳಗ ನಡೆಸಿದ್ದವು. ಕಾಳಗದ ವೇಳೆ ಸಿಟ್ಟಿನಲ್ಲಿ ಭೀಮ ಮರಕ್ಕೆ ಗುದ್ದಿದ್ದ. ಗುದ್ದಿದ ರಭಸಕ್ಕೆ ಒಂದು ದಂತ ಮುರಿದು ಬಿದ್ದಿತ್ತು. ದಂತ ಕಳೆದುಕೊಂಡು ಒಂಟಿಸಲಗ ಘೀಳಿಡುತ್ತಾ ಕಾಫಿ ತೋಟದಲ್ಲಿ ನಿಂತು ನರಳಾಡಿತ್ತು. ಈಗ ಆರೋಗ್ಯದಲ್ಲಿ ಸುಧಾರಣೆಯಾಗಿದ್ದು ಭೀಮ ಮತ್ತೆ ಆಕ್ಟೀವ್ ಆಗಿದ್ದಾನೆ.













