ನ್ಯೂಸ್ ನಾಟೌಟ್: ಸುಳ್ಯದ ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ನ.21ರಂದು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಮೊದಲಿಗೆ ಗಣ್ಯರು ಧ್ವಜಾರೋಹಣ ಮಾಡುವ ಮೂಲಕ ಕನ್ನಡ ಧ್ವಜಕ್ಕೆ ಗೌರವ ಸಲ್ಲಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಅಧ್ಯಕ್ಷ, ಡಾ. ಕೆ.ವಿ. ಚಿದಾನಂದ ಅವರು, ವೈದ್ಯಕೀಯ ವಿದ್ಯಾಭ್ಯಾಸ ಮತ್ತು ಉದ್ಯೋಗದಲ್ಲಿ ಇಂಗ್ಲಿಷ್ ಅಧಿಕವಾಗಿದ್ದರೂ ವೈದ್ಯರು ರೋಗಿಗಳೊಂದಿಗೆ ಮಾತನಾಡುವಾಗ ಕನ್ನಡವೇ ನಿಜವಾದ ಸಂಪರ್ಕ ಸೇತುವೆ. ನಮ್ಮ ಭಾಷೆ ನಮ್ಮ ಹೆಮ್ಮೆ ಕನ್ನಡವನ್ನು ಉಳಿಸಿ ಬೆಳೆಸೋಣ ಎಂದು ಕರೆ ನೀಡಿದರು.
ಮುಖ್ಯ ಅತಿಥಿ ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ಇದರ ಅಧ್ಯಕ್ಷ ಚಂದ್ರಶೇಖರ್ ಪೇರಾಲು ಮಾತನಾಡಿ, ಕನ್ನಡದ ಸಾಂಸ್ಕೃತಿಕ ವೈಭವ ಕನ್ನಡ ಸಾಹಿತ್ಯ ಮತ್ತು ಇಂದಿನ ಯುವಕರ ಜವಾಬ್ದಾರಿಯನ್ನು ವಿವರಿಸಿ, ಕನ್ನಡ ಭಾಷೆಯನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ. ಕನ್ನಡದಲ್ಲಿ ಮಾತನಾಡಬೇಕು, ಕನ್ನಡದ ಓದು ಹೆಚ್ಚಾಗಬೇಕು ಎಂದರು.
ಸುಳ್ಯ ತಾಲೂಕು ಆಸ್ಪತ್ರೆಯ ಸ್ತ್ರೀ ರೋಗ ತಜ್ಞರು ಮತ್ತು ಸಾಹಿತಿಗಳಾದ ಡಾ. ಶಾಲಿನಿ ವಿ.ಎಲ್ ಮಾತನಾಡಿ. “ಕನ್ನಡ ಭಾಷೆ ನಮ್ಮ ಅಸ್ತಿತ್ವ, ನಮ್ಮ ಆತ್ಮ. ಕನ್ನಡ ನಮ್ಮ ಉಸಿರು. ಕನ್ನಡಿಗರಾಗಿ ನಾವು ಹೆಮ್ಮೆಪಡಬೇಕು, ಕನ್ನಡದ ಪರಂಪರೆ, ಸಾಹಿತ್ಯ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರದ್ದು ಎಂದರು.
ಕಾಲೇಜಿನ ಡೀನ್ ಡಾ ನೀಲಾಂಬಿಕೈ ನಟರಾಜನ್ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದರು. ವೇದಿಕೆಯಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಉಪಾಧ್ಯಕ್ಷೆ ಶೋಭಾ ಚಿದಾನಂದ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಡಾ. ಪ್ರಕಾಶ್ ರಾವ್, ಡಾ. ಗೀತಾ ದೊಪ್ಪಾ, ಡಾ. ವೀಣಾ ಎನ್, ಡಾ. ನವ್ಯ, ಡಾ. ಅಂಜಲಿ, ಡಾ. ಅಪೂರ್ವ ದೊರೆ, ಡಾ. ರವಿಶಂಕರ್, ಕೆವಿಜಿ ಸಹ ಸಂಸ್ಥೆಗಳ ಪ್ರಾಂಶುಪಾಲರು ಡಾ. ಪ್ರಮೋದ್ ಕೆ.ಜೆ, ಡಾ. ಮನೀಶ್,ಚಂದ್ರಾವತಿ ಕೆ. ಎಸ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಒ.ಬಿ.ಜಿ ವಿಭಾಗದ ಪ್ರಾಧ್ಯಾಪಕರು ಡಾ. ವೀಣಾ ಎನ್. ಸ್ವಾಗತಿಸಿದರು. ರೋಗಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಡಾ. ನವ್ಯ ಹಾಗೂ ಸಹ ಪ್ರಾಧ್ಯಾಪಕರು ಡಾ. ಅಂಜಲಿ ಅತಿಥಿಗಳ ಪರಿಚಯ ವಾಚಿಸಿದರು. ತೃತೀಯ ವರ್ಷದ ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳಾದ ಖುಷಿ ಐ ಪಟೇಲ್ ಹಾಗೂ ಕೃಷ್ಣಲಾಲ್ ಜಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ವೈವಿಧ್ಯ ನೆರವೇರಿತು.













