ನ್ಯೂಸ್ ನಾಟೌಟ್: ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕದ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಾಹಿತ್ಯ ಸಂಭ್ರಮ- 2025 ಇದರ 5ನೇ ಕಾರ್ಯಕ್ರಮದ ಅಂಗವಾಗಿ ಸುಳ್ಯ ಪ್ರೆಸ್ ಕ್ಲಬ್ ನ ಸಹಯೋಗದೊಂದಿಗೆ ವಿಶೇಷ ಉಪನ್ಯಾಸ ಮತ್ತು ಪತ್ರಕರ್ತ ಸಾಹಿತಿಗಳ ಬೆಳದಿಂಗಳ ಕವಿಗೋಷ್ಠಿ ಪ್ರೆಸ್ ಕ್ಲಬ್ ವಠಾರದಲ್ಲಿ ನ.5 ರಂದು ಸಂಜೆ ನಡೆಯಿತು.
ಅಧ್ಯಕ್ಷತೆಯನ್ನು ಕಸಾಪ ಸುಳ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಿದ್ದರು. ಹಿರಿಯ ಸಾಹಿತಿ ಕುತ್ಯಾಳ ನಾಗಪ್ಪ ಗೌಡ (ಕಿರಣ) ಕಾರ್ಯಕ್ರಮ ಉದ್ಘಾಟಿಸಿದರು. ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಕರ್ತರ ಪಾತ್ರ ಎಂಬ ವಿಷಯದ ಬಗ್ಗೆ ಜಾನಪದ ಸಂಶೋಧಕರು ಮತ್ತು ಶಿಕ್ಷಕ ಡಾ.ಸುಂದರ್ ಕೇನಾಜೆ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಜಯಮ್ಮ ಬಿ.ಚೆಟ್ಟಿಮಾಡ, ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಲೀಲಾಧರ್ ಡಿ.ವಿ. ಮಾತನಾಡಿದರು. ಹಿರಿಯ ಪತ್ರಕರ್ತ ಹರೀಶ್ ಬಂಟ್ವಾಳ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಪತ್ರಕರ್ತ ಸಾಹಿತಿಗಳಾದ ಗಂಗಾಧರ ಮಟ್ಟಿ, ಜಯಪ್ರಕಾಶ್ ಕುಕ್ಕೆಟ್ಟಿ, ಯಶ್ವಿತ್ ಕಾಳಂಮನೆ, ಹಸೈನಾರ್ ಜಯನಗರ, ಶಿವಪ್ರಸಾದ್ ಆಲೆಟ್ಟಿ, ತೇಜೇಶ್ವರ ಕುಂದಲ್ಪಾಡಿ, ಜಯಶ್ರೀ ಕೊಯಿಂಗೋಡಿ, ದಯಾನಂದ ಕಲ್ನಾರ್, ಪದ್ಮನಾಭ ಅರಂಬೂರು ಹಾಗೂ ಚಂದ್ರಾವತಿ ಬಡ್ಡಡ್ಕ, ಮುಸ್ತಾಫ ಬೆಳ್ಳಾರೆ ಕವನ ವಾಚನ ಮಾಡಿದರು.
ಕಸಾಪ ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತ್ತಡ್ಕ, ಕಸಾಪ ಸುಳ್ಯದ ಗೌ.ಕಾರ್ಯದರ್ಶಿ ಚಂದ್ರಮತಿ ಕೆ., ಗೌ.ಕೋಶಾಧಿಕಾರಿ ದಯಾನಂದ ಆಳ್ವ, ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ಶರೀಪ್ ಜಟ್ಟಿಪಳ್ಳ ಸ್ವಾಗತಿಸಿ, ಚಂದ್ರಮತಿ ಕೆ.ವಂದಿಸಿದರು. ಕಸಾಪ ನಿರ್ದೇಶಕ, ಕಾರ್ಯಕ್ರಮ ಸಂಯೋಜಕ ರಮೇಶ್ ನೀರಬಿದಿರೆ ಕಾರ್ಯಕ್ರಮ ನಿರೂಪಿಸಿದರು.













