ನ್ಯೂಸ್ ನಾಟೌಟ್: ಉದ್ಯಾನನಗರಿ ಬೆಂಗಳೂರಿನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಹಣ ಕೊಡದೆ ವಾಹನ ಚಾಲಕರು ಪರಾರಿಯಾದ ಹಲವು ಘಟನೆಗಳ ಬಗ್ಗೆ ವರದಿಯಾಗಿತ್ತು. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡಿನಲ್ಲಿ ಇಂತಹುದೇ ಒಂದು ಘಟನೆ ನಡೆದಿರುವ ಬಗ್ಗೆ ತಿಳಿದು ಬಂದಿದೆ. ಅರಂತೋಡಿನ ನಯಾರ ಪೆಟ್ರೋಲ್ ಪಂಪ್ ನಲ್ಲಿ ಕೇರಳ ರಿಜಿಸ್ಟ್ರೇಶನ್ ಹೊಂದಿದ ಕಾರ್ ವೊಂದು ಪೆಟ್ರೋಲ್ ಹಾಕಿಸಿಕೊಂಡಿದೆ. ಆ ಬಳಿಕ ಕಾರು ಚಾಲಕ ಹಣ ನೀಡದೆ ವೇಗವಾಗಿ ಕಾರು ಚಲಾಯಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ. ಸುಮಾರು 2,510 ರೂ. ಪೆಟ್ರೋಲ್ ಹಾಕಿಸಿಕೊಳ್ಳಲಾಗಿತ್ತು ಎಂದು ತಿಳಿದು ಬಂದಿದೆ. ತಕ್ಷಣ ಎಚ್ಚೆತ್ತ ಅಲ್ಲಿನ ಸಿಬ್ಬಂದಿ ಜಾಲ್ಸೂರು ಚೆಕ್ ಪೋಸ್ಟ್ ಬಳಿ ಫಾರೆಸ್ಟ್ ಸಿಬ್ಬಂದಿ, ಆಟೋ ಚಾಲಕರು, ಜಾಲ್ಸೂರು ಪೆಟ್ರೋಲ್ ಬಂಕ್ ಸಿಬ್ಬಂದಿ ಗೆ ಮಾಹಿತಿ ನೀಡಿದರು. ಅಲ್ಲಿ ಅವರು ಕಾರನ್ನು ಅಡ್ಡಗಟ್ಟುವ ಪ್ರಯತ್ನ ನಡೆಸಿದರು. ಅಲ್ಲಿಯೂ ನಿಲ್ಲಿಸದೆ ಪುತ್ತೂರು ಕಡೆ ಕಾರನ್ನು ಚಲಾಯಿಸಿಕೊಂಡು ಚಾಲಕ ಹೋಗಿದ್ದಾನೆಂದು ತಿಳಿದು ಬಂದಿದೆ. ಆರೋಪಿಗಾಗಿ ಬಲೆ ಬೀಸಲಾಗಿದೆ ಎಂದು ತಿಳಿದು ಬಂದಿದೆ.













