ನ್ಯೂಸ್ ನಾಟೌಟ್ : ವಯಸ್ಸು ಕೇವಲ ಮನುಷ್ಯನ ಮನಸ್ಸಿನ ಮಿತಿಯಷ್ಟೇ ಹೊರತು ಸಾಧನೆಯ ಹಾದಿಗಲ್ಲ” ಎಂಬುದನ್ನು ನಟ ಜಗ್ಗೇಶ್ ಅ ವರ ಧರ್ಮಪತ್ನಿ, ಹೆಸರಾಂತ ಆಹಾರ ತಜ್ಞೆ ಡಾ. ಪರಿಮಳ ಜಗ್ಗೇಶ್ (h.c.) ಅಕ್ಷರಶಃ ಸಾಬೀತುಪಡಿಸಿದ್ದಾರೆ. ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಅವರು ಕನ್ನಡಿಗರ ಹೆಮ್ಮೆಯ ಸಾಧಕಿಯಾಗಿ ಹೊರಹೊಮ್ಮಿದ್ದಾರೆ.
ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್ (KSRA) ವತಿಯಿಂದ ಬೆಂಗಳೂರಿನ ‘ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ’ (SAI) ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ‘3ನೇ ನಾಗರಾಜ ರಾವ್ ಜಗದಾಳೆ ಶೂಟಿಂಗ್ ಸ್ಪರ್ಧೆ ಮತ್ತು ಚಾಂಪಿಯನ್ಶಿಪ್ – 2026’ ರಲ್ಲಿ ಪರಿಮಳ ಅವರು ಪಾಲ್ಗೊಂಡಿದ್ದರು.
ವಿಭಾಗ: 10 ಮೀಟರ್ ಏರ್ ಪಿಸ್ತೂಲ್ (National Rule – NR) ಚಾಂಪಿಯನ್ಶಿಪ್
ಸಾಧನೆ: ಮಾಸ್ಟರ್ ವುಮೆನ್ ಇಂಡಿವಿಜುವಲ್ ವಿಭಾಗದಲ್ಲಿ 342-4x ಅಮೋಘ ಸ್ಕೋರ್ ಮಾಡುವ ಮೂಲಕ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ.
1994 ರಿಂದಲೂ ಮಧುಮೇಹದಿಂದ (Type 2 Diabetes) ಬಳಲುತ್ತಿರುವ ಡಾ ಪರಿಮಳ (h.c.) ಅವರಿಗೆ ಕ್ರೀಡಾ ಲೋಕಕ್ಕೆ ಕಾಲಿಡುವುದು ಸುಲಭದ ಮಾತಾಗಿರಲಿಲ್ಲ. ಶೂಟಿಂಗ್ ಎನ್ನುವುದು ಅತ್ಯಂತ ಏಕಾಗ್ರತೆ ಮತ್ತು ದೈಹಿಕ ಸ್ಥಿರತೆಯನ್ನು ಬೇಡುವ ಕ್ರೀಡೆ. ಸಕ್ಕರೆ ಪ್ರಮಾಣ ಏರುಪೇರಾದಾಗ ಕೈಗಳು ನಡುಗುವ ಸಾಧ್ಯತೆ ಇರುತ್ತದೆ. ಇಂತಹ ದೈಹಿಕ ಸವಾಲನ್ನು ಗೆಲ್ಲಲು ಅವರು ಕಟ್ಟುನಿಟ್ಟಾದ ಆಹಾರ ಪದ್ಧತಿ ಹಾಗೂ ‘ರಿಕವರಿ ಪ್ಲಾನ್’ ರೂಪಿಸಿಕೊಂಡು ಅಭ್ಯಾಸ ನಡೆಸಿದ್ದರು.
ಅವರು ‘ಗೋಲ್ಡನ್ ಏಸ್ ಶೂಟಿಂಗ್ ಸ್ಪೋರ್ಟ್ಸ್ ಅಕಾಡೆಮಿ’ಯ ಪ್ರಸಿದ್ಧ ಕೋಚ್ ಸಂತೋಷ್ ಬಿ.ಎನ್. ಅವರಿಂದ ಕೇವಲ ಕೆಲವೇ ತಿಂಗಳುಗಳ ಹಿಂದೆ ತರಬೇತಿ ಆರಂಭಿಸಿದ್ದರು. ಒಬ್ಬ ಉದ್ಯಮಿಯಾಗಿ ಸಂಸ್ಥೆಯ ಜವಾಬ್ದಾರಿ ಮತ್ತು ಕುಟುಂಬದ ನಿರ್ವಹಣೆಯ ನಡುವೆಯೂ, ಪ್ರತಿದಿನ ಮುಂಜಾನೆ 4 ಗಂಟೆಗೆ ಎದ್ದು ಶೂಟಿಂಗ್ ರೇಂಜ್ನಲ್ಲಿ ಅಭ್ಯಾಸ ನಡೆಸುತ್ತಿದ್ದರು. ಅವರ ಈ ನಿರಂತರ ಪರಿಶ್ರಮವೇ ಇಂದು ಪದಕದ ರೂಪದಲ್ಲಿ ಫಲ ನೀಡಿದೆ.













