ನ್ಯೂಸ್ ನಾಟೌಟ್ : ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿ.ಜೆ.ರಾಯ್ ಪ್ರಕರಣ ಈಗ ಸ್ಫೋಟಕ ತಿರುವು ಪಡೆದುಕೊಂಡಿದೆ. ರಾಯ್ ಬರೆದಿದ್ದಾರೆನ್ನಲಾದ 9 ಪುಟಗಳ ಸುದೀರ್ಘ ನೋಟ್, ಭಾರೀ ಚರ್ಚೆಗೆ ಕಾರಣವಾಗಿದೆ. ಪ್ರಕರಣದ ಸತ್ಯಾಸತ್ಯತೆ ಹೊರತರಲು ವಿಶೇಷ ತನಿಖಾ ತಂಡ (SIT) ಈಗ ಅಖಾಡಕ್ಕಿಳಿದಿದ್ದು ತನಿಖೆ ಚುರುಕುಗೊಳಿಸಿದೆ.
ದುಡುಕಿನ ನಿರ್ಧಾರಕ್ಕೂ ಮುನ್ನ ಸಿ.ಜೆ.ರಾಯ್ ಬರೆದಿದ್ದಾರೆ ಎನ್ನಲಾದ 9 ಪುಟಗಳ ಪತ್ರ ಪೊಲೀಸರ ಕೈಸೇರಿದೆ. ಈ ಪತ್ರದಲ್ಲಿ ಹಲವು ಪ್ರಭಾವಿಗಳ ಹೆಸರುಗಳನ್ನು ರಾಯ್ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಪ್ರಮುಖವಾಗಿ ಆ ರಾಜಕಾರಣಿಯ ಹೆಸರಿದ್ದು, ಅವರ ಜೊತೆ ನಡೆಸಿದ್ದ ವ್ಯವಹಾರಗಳ ಕುರಿತು ರಾಯ್ ಬರೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ಶೀಘ್ರದಲ್ಲೇ ಆ ರಾಜಕಾರಣಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ.
ಕೇವಲ ರಾಜಕಾರಣಿಗಳಷ್ಟೇ ಅಲ್ಲದೆ, ಆದಾಯ ತೆರಿಗೆ ಇಲಾಖೆಯ (IT) ಅಧಿಕಾರಿಗಳ ಕಿರುಕುಳದ ಬಗ್ಗೆಯೂ ರಾಯ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಐಟಿ ಅಧಿಕಾರಿಗಳು ನೀಡುತ್ತಿದ್ದ ‘ಟಾರ್ಚರ್’ ಬಗ್ಗೆ ಮತ್ತು ಅದರಿಂದ ತಾನು ಅನುಭವಿಸುತ್ತಿದ್ದ ಮಾನಸಿಕ ಒತ್ತಡದ ಬಗ್ಗೆ ರಾಯ್ ಪತ್ರದಲ್ಲಿ ವಿವರಿಸಿದ್ದಾರೆ ಎನ್ನಲಾಗಿದೆ. ತಮಗೆ ಯಾವ ರೀತಿ ಕಿರುಕುಳ ನೀಡಲಾಗುತ್ತಿತ್ತು ಎಂಬ ಬಗ್ಗೆ ಪತ್ರದಲ್ಲಿ ಮಾಹಿತಿ ನೀಡಲಾಗಿದ್ದು, ಎಸ್ಐಟಿ ಇದನ್ನು ಗಂಭೀರವಾಗಿ ಪರಿಗಣಿಸಿದೆ.
ಎಸ್ಐಟಿ ಈಗಾಗಲೇ ಹಲವು ಆಯಾಮಗಳಲ್ಲಿ ತನಿಖೆ ಆರಂಭಿಸಿದೆ. ಈಗಾಗಲೇ ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರಿಂದ ಪೊಲೀಸರು ಮಾಹಿತಿ ಪಡೆದಿದ್ದು, ಡೆತ್ ನೋಟ್ನ ಕೈಬರಹ ರಾಯ್ ಅವರದ್ದೇ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಿದ್ದಾರೆ. ರಾಯ್ ತಂಗಿದ್ದ ಹೋಟೆಲ್ ರೂಂ ಮತ್ತು ಅವರ ಬ್ಯಾಂಕ್ ಲಾಕರ್ಗಳಲ್ಲಿ ಪತ್ತೆಯಾದ ಮಹತ್ವದ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ನಡೆಯುತ್ತಿದೆ. ಶೀಘ್ರದಲ್ಲೇ ರಾಯ್ ಅವರ ಕುಟುಂಬದ ಸದಸ್ಯರ ಹೇಳಿಕೆಯನ್ನು ಎಸ್ಐಟಿ ದಾಖಲಿಸಿಕೊಳ್ಳಲಿದೆ.
ರಾಯ್ ಅವರ ಪುತ್ರ ರೋಹಿತ್ ಅವರಿಂದಲೂ ಎಸ್ಐಟಿ ಮಾಹಿತಿ ಪಡೆಯಲಿದೆ. ದುಬೈನಲ್ಲಿ ನಡೆಸುತ್ತಿದ್ದ ಬೃಹತ್ ಉದ್ಯಮದಲ್ಲಿ ಏನಾದರೂ ಭಾರಿ ನಷ್ಟವಾಗಿತ್ತಾ? ಅಥವಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಿ.ಜೆ.ರಾಯ್ ಅವರಿಗೆ ಯಾರಿಂದಲಾದರೂ ಬೆದರಿಕೆ ಕರೆಗಳು (Threat Calls) ಬಂದಿದ್ದವಾ? ಎಂಬ ಬಗ್ಗೆ ರೋಹಿತ್ ಅವರ ಬಳಿ ಪೊಲೀಸರು ಮಾಹಿತಿ ಕಲೆಹಾಕಲಿದ್ದಾರೆ. ರಾಯ್ ಅವರು ಮಗನ ಬಳಿ ಏನಾದರೂ ತಮ್ಮ ಸಂಕಷ್ಟಗಳನ್ನು ಹಂಚಿಕೊಂಡಿದ್ದರಾ ಎಂಬುದು ತನಿಖೆಯ ಪ್ರಮುಖ ಭಾಗವಾಗಿದೆ.













