ನ್ಯೂಸ್ ನಾಟೌಟ್ : ಮುಂಬೈನ ಉದ್ಯಮಿಯೊಬ್ಬರಿಗೆ ಪಾರಿವಾಳಗಳಿಗೆ ಆಹಾರ ನೀಡುವ ಅಭ್ಯಾಸವಿತ್ತು. ಇದರಿಂದ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದಾದರ್ನ ಉದ್ಯಮಿ ನಿತಿನ್ ಶೇತ್ ಅವರನ್ನು ನ್ಯಾಯಾಲಯ ಅಪರಾಧಿ ಎಂದು ಘೋಷಿಸಿ ದಂಡ ವಿಧಿಸಿದೆ. ಪಾರಿವಾಳಗೆ ಆಹಾರ ನೀಡಿದ್ದಕ್ಕೆ ಶಿಕ್ಷೆ ಆಗಿರೋದು ಇದೇ ಮೊದಲ ಪ್ರಕರಣ ಎಂದು ಹೇಳಲಾಗಿದೆ.
ಪೊಲೀಸ್ ತನಿಖೆಯ ಸಮಯದಲ್ಲಿ, ನಿತಿನ್ ಶೇಠ್ ತಮ್ಮ ತಪ್ಪನ್ನು ಒಪ್ಪಿಕೊಂಡರು. ಪೊಲೀಸರ ಪ್ರಕಾರ, ನಿಷೇಧದ ಹೊರತಾಗಿಯೂ ಆರೋಪಿಯು ಸಾರ್ವಜನಿಕ ಸ್ಥಳದಲ್ಲಿ ಪಾರಿವಾಳಗಳಿಗೆ ಆಹಾರ ನೀಡುತ್ತಿದ್ದರು. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿತ್ತು.
5 ಸಾವಿರ ದಂಡ
ನ್ಯಾಯಾಲಯವು ನಿತಿನ್ ಶೇಠ್ ಅವರಿಗೆ ₹5,000 ದಂಡ ವಿಧಿಸಿದೆ. ಬಾಂಬೆ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಬಿ.ವೈ. ಮಿಸಾಲ್, ಕಳೆದ ಸೋಮವಾರ ತೀರ್ಪು ಪ್ರಕಟಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 223 (ಬಿ) ಅಡಿಯಲ್ಲಿ ಮಾನವ ಜೀವ, ಆರೋಗ್ಯ ಅಥವಾ ಸುರಕ್ಷತೆಗೆ ಅಪಾಯ ಉಂಟುಮಾಡುವ ಕೃತ್ಯ ಎಸಗಿದ್ದಾನೆ ಎಂದು ತೀರ್ಪು ಹೇಳಿದೆ. ಐಪಿಸಿ ಸೆಕ್ಷನ್ 271 ರ ಅಡಿಯಲ್ಲಿ ಜೀವ, ಆರೋಗ್ಯ ಅಥವಾ ಸುರಕ್ಷತೆಗೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಾಧ್ಯತೆಯ ನಿರ್ಲಕ್ಷ್ಯದ ಕೃತ್ಯದ ಆರೋಪ ಹೊರಿಸಲಾಗಿತ್ತು.
ಇದೆ ಮೊದಲ ಬಾರಿಗೆ ಈ ರೀತಿ ಶಿಕ್ಷೆ ನೀಡಲಾಗಿದೆ. ಭವಿಷ್ಯದಲ್ಲಿ ಇಂಥ ನಿರ್ಬಂಧಗಳನ್ನು ಹಗುರವಾಗಿ ಪರಿಗಣಿಸದಂತೆ ತಡೆಯಲು ಪೂರ್ವನಿದರ್ಶನವಾಗಿ ನೋಡಲಾಗುತ್ತಿದೆ ಕೋರ್ಟ್ ಉಲ್ಲೇಖಿಸಿದೆ. BMC ಈಗಾಗಲೇ ಪಾರಿವಾಳಗಳಿಗೆ ಆಹಾರ ನೀಡುವುದನ್ನು ನಿಷೇಧಿಸಿದೆ. ಬಾಂಬೆ ಹೈಕೋರ್ಟ್ ಕೂಡ ಕಳೆದ ಆಗಸ್ಟ್ನಲ್ಲಿ ಇದರ ಬಗ್ಗೆ ವಿಚಾರಣೆ ನಡೆಸಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದನ್ನು ನಿಷೇಧಿಸುವ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಬೆಂಗಳೂರಲ್ಲೂ ಸರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕೋದನ್ನು ನಿಷೇಧಿಸಲಾಗಿದೆ.













