ನ್ಯೂಸ್ ನಾಟೌಟ್: ಸುಳ್ಯದ ಯುವತಿಯೊಬ್ಬರು ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ವರದಿಯಾಗಿದೆ.
ಸುಳ್ಯದ ರಥ ಬೀದಿ ನಿವಾಸಿಯಾಗಿದ್ದ ಮಮತಾ ಅನ್ನುವವರ ಪುತ್ರಿ ಸಿಂಧು ಮೃತಪಟ್ಟ ಯುವತಿ. ಇವರು ಪುತ್ತೂರಿನ ಆದರ್ಶ ಸೊಸೈಟಿಯಲ್ಲಿ ಉದ್ಯೋಗಿಯಾಗಿದ್ದರು. ಡಿ.16ರಂದು ಕೆಲಸ ಮುಗಿಸಿ ಮನೆಗೆ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ಅಡ್ಕಾರ್ ನಲ್ಲಿ ಬಸ್ ಸೀಟಿನಿಂದ ಜಾರಿ ಬಿದ್ದಿದ್ದಾರೆ. ಬಸ್ ನಲ್ಲಿ ಇದ್ದವರು ತಕ್ಷಣ ಅವರನ್ನು ಉಪಚರಿಸಿದ್ದಾರೆ. ಸಿಂಧು ಅವರನ್ನು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದರು. ಮಂಗಳೂರಿನ ಆಸ್ಪತ್ರೆಯಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಮೆದುಳಿನ ರಕ್ತಸ್ರಾವಗೊಂಡಿದ್ದರಿಂದ ಅವರು ಕೋಮಾಗೆ ಜಾರಿದರು ಎಂದು ತಿಳಿದು ಬಂದಿದೆ. ನಿಧನದ ಬೆನ್ನಲ್ಲೇ ಕುಟುಂಬ ವರ್ಗ ಕಣ್ಣೀರಾಯಿತು. ಅತೀವ ನೋವಿನ ನಡುವೆಯೂ ಮಗಳ ಅಂಗಾಂಗವನ್ನು ದಾನ ಮಾಡುವುದಕ್ಕೆ ಮುಂದಾದರು. ಈ ಹಿನ್ನೆಲೆಯಲ್ಲಿ ಮಂಗಳೂರಿನ ಮೂರು ಆಸ್ಪತ್ರೆಗೂ ಹಾಗೂ ಮೈಸೂರಿನ ಒಂದು ಆಸ್ಪತ್ರೆಗೂ ಅಂಗಾಗವನ್ನು ದಾನ ನೀಡಲಾಯಿತು. ಮೈಸೂರಿಗೆ ಅಂಗಾಂಗ ತೆಗೆದುಕೊಂಡು ಹೋದ ಸಂದರ್ಭದಲ್ಲಿ ಸುಳ್ಯದಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಯಿತು. ಸುಳ್ಯದ ಆಂಬ್ಯುಲೆನ್ಸ್ ಚಾಲಕ ಮಾಲಕರು ಸಹಕಾರ ನೀಡಿದರು.













