ನ್ಯೂಸ್ ನಾಟೌಟ್ : ತಿರುಮಲ ತಿರುಪತಿ ದೇವಸ್ಥಾನ ಸದ್ಯಕ್ಕೆ ವಿವಾದಗಳಿಂದ ಮುಕ್ತವಾಗುವಂತೆ ಕಾಣುತ್ತಿಲ್ಲ. ಕಲಬೆರಕೆ ಲಡ್ಡು ವಿವಾದ, ಹುಂಡಿ ಹಣ ಕಳ್ಳತನ ಪ್ರಕರಣದ ಬಳಿಕ ಇದೀಗ ದುಪ್ಪಟ್ಟ ವಿವಾದ ಬೆಳಕಿಗೆ ಬಂದಿದೆ.
2015 ರಿಂದ 2025ರ ಅವಧಿಯಲ್ಲಿ ರೇಷ್ಮೆ ದುಪ್ಪಟ್ಟಗಳ ಖರೀದಿಯಲ್ಲಿ ಬಹುದೊಡ್ಡ ಹಗರಣ ನಡೆದಿರೋದನ್ನು ವಿಜಿಲೆನ್ಸಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. 2015 ರಿಂದ 2025 ಅವಧಿಯಲ್ಲಿ ಅಕ್ರಮ ನಡೆದಿದ್ದು, ಬರೋಬ್ಬರಿ 54 ಕೋಟಿ ಅವ್ಯವಹಾರ ನಡೆದಿರೋದು ತನಿಖೆಯಲ್ಲಿ ಗೊತ್ತಾಗಿದೆ.
ಇಲ್ಲಿ ದೇವರ ಬಟ್ಟೆ ಖರೀದಿ ಹೆಸರಲ್ಲೂ ಟೋಪಿ ಹಾಕಲಾಗಿದೆ. ನಕಲಿ ರೇಷ್ಮೆ ದುಪ್ಪಟ್ಟಗಳನ್ನು ಪೂರೈಸಿ ಗೋಲ್ಮಾಲ್ ಮಾಡಲಾಗಿದೆ. 100 ಪರ್ಸೆಂಟ್ ಪಾಲಿಯೆಸ್ಟರ್-ಸಿಲ್ಕ್ (Polyester-silk) ಎಂದು ಬಿಲ್ನಲ್ಲಿ ನಮೂದಿಸಿ ನಕಲಿ ರೇಷ್ಮೆ ದುಪ್ಪಟ್ಟಗಳನ್ನು ದೇಗುಲಕ್ಕೆ ಪೂರೈಕೆ ಮಾಡಲಾಗಿದೆ. ಈ ಹಗರಣದ ಒಟ್ಟು ಮೊತ್ತ 54 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಅಧಿಕಾರಿಗಳ ಪ್ರಕಾರ, ಸುಮಾರು 15 ಸಾವಿರ ದುಪ್ಪಟ್ಟಗಳ ಖರೀದಿಯಲ್ಲಿ ಹಗರಣ ಆಗಿದೆ. ಒಂದು ದುಪ್ಪಟ್ಟಕ್ಕೆ 1389 ರೂಪಾಯಿಂತೆ ಖರೀದಿ ಮಾಡಲಾಗಿದೆ. ಎಲ್ಲಾ ದುಪ್ಪಟ್ಟಗಳನ್ನು ರೇಷ್ಮೆಯಿಂದ ಮಾಡಿರೋದು ಎಂದು ಖರೀದಿಸಿದ್ದಾರೆ. ಅನುಮಾನಗೊಂಡು ದುಪ್ಪಟ್ಟಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಸೆಂಟ್ರಲ್ ಸಿಲ್ಕ್ ಬೊರ್ಟ್ ಹಾಗೂ ಎರಡು ಲ್ಯಾಬೊರೇಟರೀಸ್ಗಳಿಂದ ಬಂದಿರುವ ವರದಿಯಲ್ಲಿ ಅದು ನಕಲಿ ಸಿಲ್ಕ್ ಅನ್ನೋದು ಸಾಬೀತಾಗಿದೆ ಎಂದು ತಿಳಿಸಿದ್ದಾರೆ.













