ನ್ಯೂಸ್ ನಾಟೌಟ್ : ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಸಂಜೀವ ಕುದ್ಪಾಜೆ ಅವರು 33 ವರ್ಷಗಳ ಸುದೀರ್ಘ ಸೇವೆಯಿಂದ (ನ. 29ರಂದು) ನಿವೃತ್ತಿ ಹೊಂದಿದರು. ಈ ಪ್ರಯುಕ್ತ ಕಾಲೇಜು ವತಿಯಿಂದ ಅವರನ್ನು ಸನ್ಮಾನಿಸಲಾಯಿತು.
ಪರಿಚಯ: ಕುದ್ಪಾಜೆ ದಿ. ಅಯ್ಯಣ್ಣ ಗೌಡ ಮತ್ತು ಹೊನ್ನಮ್ಮ ದಂಪತಿಯ ಪುತ್ರನಾಗಿ 1965ರ ಡಿಸೆಂಬರ್ 1ರಂದು ಜನಿಸಿದ ಸಂಜೀವ ಕುಪ್ಪಾಜೆಯವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು 1-4 ಸ.ಕಿ.ಪ್ರಾ. ಶಾಲೆ ಕೊಡಿಯಾಲಬೈಲು ಹಾಗೂ 5-7 ಸ.ಮಾ.ಹಿ.ಪ್ರಾ. ಶಾಲೆ ಸುಳ್ಯದಲ್ಲಿ ಪೂರೈಸಿ, ಪ್ರೌಢ ಹಾಗೂ ಪಿ.ಯು. ಶಿಕ್ಷಣವನ್ನು ಸುಳ್ಯದ ಜೂನಿಯರ್ ಕಾಲೇಜಿನಲ್ಲಿ ಪೂರೈಸಿದರು. 1985ರಿಂದ 1988ರ ತನಕ ಸುಳ್ಯದ ಎನ್.ಎಂ.ಸಿ.ಯಲ್ಲಿ ಬಿ.ಎ. ಪದವಿಯನ್ನು ಮುಗಿಸಿ, ಮದ್ರಾಸ್ ಯೂನಿವರ್ಸಿಟಿಯಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಮತ್ತು ಎಂ.ಫಿಲ್ ಪದವಿ ಪಡೆದು, 1992ರ ಜು. 1ರಂದು ಸುಳ್ಯದ ಎನ್.ಎಂ.ಸಿ.ಗೆ ಕನ್ನಡ ಉಪನ್ಯಾಸಕರಾಗಿ ಸೇವೆಗೆ ಸೇರ್ಪಡೆಗೊಂಡರು.
ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸುದೀರ್ಘ ಸೇವೆ: ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದಲ್ಲಿ ಸುಮಾರು 27 ವರ್ಷ ಸುದೀರ್ಘ ಸೇವೆ ಸಲ್ಲಿಸಿರುವ ಸಂಜೀವ ಕಕುದ್ಪಾಜೆಯವರು ತಮ್ಮ ಸೇವಾ ಅವಧಿಯಲ್ಲಿ ಕಾಲೇಜಿನ ಎನ್.ಎಸ್.ಎಸ್. ಘಟಕಕ್ಕೆ ಅತ್ಯುತ್ತಮ ರಾಜ್ಯಪ್ರಶಸ್ತಿ ಲಭಿಸಿರುತ್ತದೆ. ಸುಳ್ಯದ ರೋಟರಿ ಕ್ಲಬ್ನ ಸದಸ್ಯರಾಗಿ 2010-11ರಲ್ಲಿ ಕ್ಲಬ್ನ ಅಧ್ಯಕ್ಷರಾಗಿ ದುಡಿದಿರುವ ಇವರ ಅಧ್ಯಕ್ಷಾವಧಿಯಲ್ಲಿ ಬಳ್ಪ ಗ್ರಾಮಕ್ಕೆ ಸುಮಾರು 8 ಲಕ್ಷ ಮೌಲ್ಯದ ಕುಡಿಯುವ ನೀರಿನ ಯೋಜನೆಯನ್ನು ಸ್ಥಾಪಿಸಿ, ರೋಟರಿ ಜಿಲ್ಲೆಯ ಅತ್ಯುತ್ತಮ ಸಮಾಜ ಸೇವಾ ಪ್ರಶಸ್ತಿ ಲಭಿಸಿರುವುದಲ್ಲದೆ ಝೋನಲ್ ಲೆಫ್ಟಿನೆಂಟ್ ಆಗಿ ಸೇವೆ ಸಲ್ಲಿಸಿರುತ್ತಾರೆ.
ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿರ್ದೇಶಕರಾಗಿ, ಜೂನಿಯರ್ ರೆಡ್ ಕ್ರಾಸ್ ಘಟಕದ ಅಧ್ಯಕ್ಷರಾಗಿ, ಕಾಲೇಜಿನ ರೆಡ್ ರಿಬ್ಬನ್ ಘಟಕಕ್ಕೆ ಜಿಲ್ಲಾ ಮಟ್ಟದ ಅತ್ಯುತ್ತಮ ಘಟಕ ಪ್ರಶಸ್ತಿ ಲಭಿಸಿರುವುದು ಇವರ ಸೇವೆಗೆ ಲಭಿಸಿದ ಗೌರವವಾಗಿದೆ. ಸುಳ್ಯದಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಡಾ. ಕುರುಂಜಿ ಪ್ರತಿಭಾ ಪುರಸ್ಕಾರ, ಉದಯ ಟಿವಿ ಆದರ್ಶ ದಂಪತಿ ಪ್ರಶಸ್ತಿ, ಹವ್ಯಾಸಿ ಜೇನು ಕೃಷಿಕರ ನೆಲೆಯಲ್ಲಿ ಜೇನು ಕೈಗಾರಿಕಾ ಇಲಾಖೆಯಿಂದ ಸನ್ಮಾನ ಸೇರಿದಂತೆ ಹತ್ತು ಹಲವು ಪ್ರಶಸ್ತಿ ಪುರಸ್ಕಾರ, ಸನ್ಮಾನಗಳಿಗೆ ಭಾಜನಾರುವ ಸಂಜೀವ ಕುದ್ಪಾಜೆಯವರು 1993ರಲ್ಲಿ ಸುಳ್ಯದಿಂದ ಕುಂದಾಪುರದ ತನಕ 18ದಿನಗಳ ಕಾಲ ನಡದ ಮಾನವತಾ ಜಾಥಾ, ಸುಳ್ಯದಿಂದ ಪಾಲ್ಗೊಂಡಿದ್ದರು.
ಸಾಮಾಜಿಕ ಜಾಲತಾಣದ ಮೂಲಕ ಕೃಷಿ ಚಟುವಟಿಕೆ
ಸಾಮಾಜಿಕ ಜಾಲತಾಣದ ಮೂಲಕ ಕೃಷಿ ಮತ್ತಿತರ ಚಟುವಟಿಕೆಗಳನ್ನು ಬೆಳೆಸುವ ಉದ್ದೇಶದಿಂದ ಸುಮಾರು 65 ಕ್ಕೂ ಹೆಚ್ಚು ವಾಟ್ಸಾಫ್ ಗ್ರೂಪ್ ಗಳನ್ನು ರಚಿಸಿ ತರಕಾರಿ ಬೀಜ, ನಾಟಿಕೋಳಿ, ಜೇನು ಕೃಷಿ, ಪರಿಸರ ಸಂರಕ್ಷಣೆ ಸೇರಿದಂತೆ ಹಲವಾರು ಕೃಷಿ ಉಪಯುಕ್ತ ಮಾಹಿತಿಗಳ ಹಂಚಿಕೆ ಕಾರ್ಯ ಮಾಡುತ್ತಿದ್ದಾರೆ. ಎಲ್ಲಾ ಗ್ರೂಪ್ ಗಳೂ ಸಾವಿರಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿದ್ದು, ಅವಶ್ಯಕತೆಯುಳ್ಳವರಿಗೆ ಸಮಗ್ರ ಮಾಹಿತಿ ದೊರೆಯುವುದಲ್ಲದೆ ಮಾರಾಟ ಖರೀದಿಗಳೂ ನಡೆಯುತ್ತಿದೆ. ಕಲಾರಂಗದಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಸಂಜೀವ ಕುದ್ದಾಜೆಯವರು ಟಿಂಬೂರೂಚ ಧಾರಾವಾಹಿಯಲ್ಲಿ, ವಾಸ್ಕೋಡಿಗಾಮ ಚಲನಚಿತ್ರದಲ್ಲಿ ನಟಿಸಿರುವುದರೊಂದಿಗೆ ಕುರುಂಜಿ ಸಾಕ್ಷ್ಯಚಿತ್ರದ ಸಹಾಯಕ ನಿರ್ದೇಶಕರಾಗಿ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರೊಂದಿಗೆ ದುಡಿದಿದ್ದಾರೆ. ವಿಶೇಷವೆಂದರೆ ಎಒಎಲ್ಇ ಆಶ್ರಯದಲ್ಲಿರುವ ಎನ್.ಎಂ.ಸಿ.ಯ ವಿದ್ಯಾರ್ಥಿಯಾಗಿ, ಅಲ್ಲಿಯೇ ಉಪನ್ಯಾಸಕರಾಗಿ, ಅದೇ ಸಂಸ್ಥೆಯಲ್ಲಿ ನಿವೃತ್ತಿ ಹೊಂದಿರುವ ಪ್ರಥಮ ವ್ಯಕ್ತಿ ಸಂಜೀವ ಕುಪ್ಪಾಜೆಯವರು.
ಸಂಜೀವ ಕುದ್ಪಾಜೆಯವರು 1997ರಲ್ಲಿ ಧನಲಕ್ಷ್ಮಿಯವರನ್ನು ವಿವಾಹವಾಗಿ ಓರ್ವ ಪುತ್ರ ಹಾಗೂ ಓರ್ವ ಪುತ್ರನನ್ನು ಪಡೆದರು. ಪುತ್ರಿ ಗೌರಿ ಕುದ್ಪಾಜೆ ಎಂ.ಎಸ್ಸಿ ಪದವೀಧರೆಯಾಗಿ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದರೆ, ಪುತ್ರ ಗೌತಮ್ ಕುದ್ಪಾಜೆ ಎಂ.ಐ.ಟಿ.ಇ ಯಲ್ಲಿ ಇಂಜಿನಿಯರಿಂಗ್ ಪದವಿಯನ್ನು ವ್ಯಾಸಂಗ ಮಾಡುತ್ತಿದ್ದಾರೆ. ಪತ್ನಿ ಧನಲಕ್ಷ್ಮಿಯವರು ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಶಿಕ್ಷಣ ಸಂಯೋಜಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.













