ನ್ಯೂಸ್ ನಾಟೌಟ್: ಕನ್ನಡ ಚಿತ್ರರಂಗದಲ್ಲಿ ಸುಮಾರು 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಹಿರಿಯ ಹಾಸ್ಯ ಕಲಾವಿದ ಉಮೇಶ್ ಅವರು ಇಂದು (ಭಾನುವಾರ) ಬೆಳಿಗ್ಗೆ ನಿಧನರಾಗಿದ್ದಾರೆ. ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರಿಗೆ 80 ವರ್ಷ ವಯಸ್ಸಾಗಿತ್ತು. ಜೆಪಿ ನಗರದಲ್ಲಿರುವ ಅವರ ನಿವಾಸದಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬನಶಂಕರಿ ಚಿತಾಗಾರದಲ್ಲಿ ಸಂಜೆ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ.
ಉಮೇಶ್ ಅವರು ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ. ಅವರ ಮಗ ಕೆಲವು ವರ್ಷಗಳ ಹಿಂದೆ ಅಪಘಾತದಲ್ಲಿ ತೀರಿಕೊಂಡಿದ್ದರು. ಉಮೇಶ್ ಅವರು, 1960–61ರಲ್ಲಿ ತೆರೆಕಂಡ ‘ಮಕ್ಕಳ ರಾಜ್ಯ’ ಸಿನಿಮಾದಲ್ಲಿ ಬಾಲನಟನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಆ ಸಿನಿಮಾ ಕನ್ನಡ, ತಮಿಳು ಭಾಷೆಯಲ್ಲೂ ಬಿಡುಗಡೆಯಾಗಿತ್ತು. ಬಳಿಕ 1976ರಲ್ಲಿ ತೆರೆಕಂಡ ‘ಕಥಾಸಂಗಮ’ ಸಿನಿಮಾ ಮೂಲಕ ಬಣ್ಣದ ಬದುಕಿಗೆ ವಾಪಸಾಗಿದ್ದರು. ಅನುಪಮಾ, ಭಾಗ್ಯವಂತರು, ಕಿಲಾಡಿ ಜೋಡಿ, ಗುರು ಶಿಷ್ಯರು, ಭೂಮಿಗೆ ಬಂದ ಭಗವಂತ, ಹಾಲು ಜೇನು, ಕಾಮನಬಿಲ್ಲು, ಅಪೂರ್ವ ಸಂಗಮ, ಶೃತಿ ಸೇರಿದಾಗ, ಮೇಘ ಮಂದಾರ, ಆಕಸ್ಮಿಕ, ಸರ್ವರ್ ಸೋಮಣ್ಣ, ಮೇಘಮಾಲೆ, ನನ್ನಾಸೆಯ ಹೂವೆ, ಜಾಕಿ, ರ್ಯಾಂಬೊ, ಮುಸ್ಸಂಜೆ ಮಾತು, ಗೋಲ್ಮಾಲ್ ರಾಧಾಕೃಷ್ಣ, ಡೇರ್ ಡೆವಿಲ್ ಮುಸ್ತಫಾ, ಹಗಲುವೇಷ ಸೇರಿದಂತೆ 350ಕ್ಕೂ ಸಿನಿಮಾಗಳಲ್ಲಿ ನಟಿಸುವ ಮೂಲಕ ರಾಜ್ಯದಲ್ಲಿ ಮನೆಮಾತಾಗಿದ್ದಾರೆ. ಡಾ. ರಾಜ್ಕುಮಾರ್, ವಿಷ್ಣುವರ್ಧನ್ ಅವರಂತಹ ದಿಗ್ಗಜರೊಂದಿಗೂ ತೆರೆ ಹಂಚಿಕೊಂಡಿದ್ದರು.
ಉಮೇಶ್ ನಿಧನದ ಬಗ್ಗೆ ಭಾವುಕರಾದ ಪತ್ನಿ ಸುಧಾ, ‘ಮದುವೆ ಆಗಿದ್ದಾಗಿನಿಂದಲೂ ತುಂಬಾ ಪ್ರೀತಿಯಿಂದ ಇದ್ದೆವು. ಯಾವತ್ತು ನಾವು ಜಗಳ ಆಡಿಲ್ಲ. ನನ್ನ ಮಗನು ಹೊರಟು ಹೋಗಿದ್ದಾನೆ. ಈಗ ನನ್ನ ಮಗಳು ಮಾತ್ರ ಇದ್ದಾಳೆ. ನಮಗೆ ಬೇರೆ ಯಾರು ಇಲ್ಲ ಎಂದಿದ್ದಾರೆ. ನಾನು ಹೊರಟು ಹೋಗಿದ್ರೆ ಚೆನ್ನಾಗಿರ್ತಿತ್ತು ಅನ್ಸುತ್ತೆ. ಮಗಳ ಮುಖ ನೋಡ್ಕೊಂಡು ಇದ್ದೇನೆ. ನನಗೆ ಆಸ್ತಿ, ಬಂಗಾರ ಏನೂ ಬೇಡ.. ನನ್ನ ಗಂಡನೇ ನನಗೆ ಆಸ್ತಿ ಎಂದು ಹೇಳಿದ್ದಾರೆ. ನನ್ನ ಯಜಮನಾರನ್ನ ಮರೆಯೋಕೆ ಆಗಲ್ಲ. ಕೊನೆವರೆಗೂ ನಾನು ದುಡಿತ್ತೀನಿ ಕಣೇ… ನಾನು ಸಾಯಲ್ಲ.. ಯೋಚನೆ ಮಾಡ್ಬೇಡ ಅಂತಿದ್ರು. ನನ್ನ ಮಗಳನ್ನ ನೊಡ್ಕೊಂಡು ಇರ್ಬೇಕು ಅಷ್ಟೇ’ ಎಂದು ಗಂಡನನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ.













