ನ್ಯೂಸ್ ನಾಟೌಟ್ : ಪತಿ ಸೌರಭ್ ರಜಪೂತ್ ಅವರನ್ನು ಭೀಕರವಾಗಿ ಕೊಲೆ ಮಾಡಿ ಅವರ ದೇಹವನ್ನು ನೀಲಿ ಡ್ರಮ್ನಲ್ಲಿ ತುಂಬಿಸಿದ ಪ್ರಕರಣದಲ್ಲಿ ಮೀರತ್ ಜೈಲಿನಲ್ಲಿರುವ ಮುಸ್ಕಾನ್, ನವಜಾತ ಮಗಳಿಗೆ ರಾಧಾ ಎಂದು ಹೆಸರಿಟ್ಟಿದ್ದು, ಈ ನಡುವೆ ಸೌರಭ್ ಕುಟುಂಬಸ್ಥರು ಮಗುವಿನ ಡಿಎನ್ಎ ಪರೀಕ್ಷೆಗೆ ಒತ್ತಾಯಿಸಿದ್ದಾರೆ.
ನವೆಂಬರ್ 24 ರಂದು ಲಾಲಾ ಲಜಪತ್ ರಾಯ್ ಸ್ಮಾರಕ ವೈದ್ಯಕೀಯ ಕಾಲೇಜಿನಲ್ಲಿ ಮಗು ಜನಿಸಿದ್ದು, ಅದೇ ದಿನ ಸೌರಭ್ ಅವರ ಜನ್ಮದಿನವೂ ಆಗಿತ್ತು ಎಂದು ತಿಳಿದುಬಂದಿದೆ.
ಆಸ್ಪತ್ರೆಯ ಸ್ತ್ರೀರೋಗ ವಿಭಾಗದ ಮುಖ್ಯಸ್ಥ ಡಾ. ಶಗುನ್ ಅವರು ಮಾತನಾಡಿ, ಮುಸ್ಕಾನ್ ಅವರನ್ನು ಬುಧವಾರ ಜಿಲ್ಲಾ ಜೈಲಿಗೆ ಕಳುಹಿಸಲಾಗುವುದು ಎಂದು ಹೇಳಿದ್ದಾರೆ.
ಜೈಲು ಸೂಪರಿಂಟೆಂಡೆಂಟ್ ವಿರೇಶ್ ರಾಜ್ ಶರ್ಮಾ ಅವರು ಮಾತನಾಡಿ ಆರು ವರ್ಷದವರೆಗೆ ಮಗುವನ್ನು ಮಹಿಳಾ ಬ್ಯಾರಕ್ನಲ್ಲಿ ತಾಯಿಯೊಂದಿಗೆ ಇರಿಸಬಹುದು ಎಂದು ಹೇಳಿದ್ದಾರೆ. ನವಜಾತ ಶಿಶುವಿಗೆ ಜೈಲು ಆಡಳಿತವು ಬಟ್ಟೆ, ವೈದ್ಯಕೀಯ ಸೌಲಭ್ಯಗಳು ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ಒದಗಿಸಲಿದೆ ಎಂದು ತಿಳಿಸಿದ್ದಾರೆ.
ಸೌರಭ್ ಅವರ ಸಹೋದರ ರಾಹುಲ್ ಅವರು ಮಾತನಾಡಿ, ಈ ಹಿಂದೆ ಡಿಎನ್ಎ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದೆವು. ಈಗ ಅದೇ ಪರೀಕ್ಷೆಗಾಗಿ ನ್ಯಾಯಾಲಯದಲ್ಲಿ ಹೊಸ ಅರ್ಜಿ ಸಲ್ಲಿಸುತ್ತೇವೆಂದು ಹೇಳಿದ್ದಾರೆ.
ಮುಸ್ಕಾನ್, ತನ್ನ ಪ್ರಿಯಕರ ಸಾಹಿಲ್ ಶುಕ್ಲಾ ಜೊತೆ ಸೇರಿ ಸೌರಭ್ ಅವರನ್ನು ಕೊಂದು, ಅವರ ದೇಹವನ್ನು ಸಿಮೆಂಟ್ ತುಂಬಿದ ನೀಲಿ ಡ್ರಮ್ನಲ್ಲಿ ಬಚ್ಚಿಟ್ಟಿದ್ದಾರೆ ಎಂದು ರಾಹುಲ್ ಅವರು ಆರೋಪಿಸಿದ್ದಾರೆ.













