ನ್ಯೂಸ್ ನಾಟೌಟ್: ಜೇನುಹುಳುಗಳ ದಾಳಿಯಿಂದ ಸುಮಾರು 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ವಿರಾಜಪೇಟೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಹಾಲು ವಿತರಣೆ ಮಾಡುವ ಸಂದರ್ಭ ಸಮೀಪದ ಗದ್ದೆ ಬಯಲಿನಿಂದ ಗುಂಪು ಗುಂಪಾಗಿ ಹಾರಿ ಬಂದ ಜೇನು ಹುಳುಗಳು ಮಕ್ಕಳು ಹಾಗೂ ಶಿಕ್ಷಕರ ಮೇಲೆ ದಾಳಿ ಮಾಡಿವೆ. ಮುಖ್ಯ ಶಿಕ್ಷಕಿ ಅನ್ನಮ್ಮ ಪಿ.ಡಿ ಮತ್ತು ಸಿಬ್ಬಂದಿಗಳು ಮಕ್ಕಳನ್ನು ತಕ್ಷಣ ಶಾಲಾ ಕೊಠಡಿಯ ಒಳಗೆ ಸೇರಿಸುವ ಮೂಲಕ ಹೆಚ್ಚಿನ ಅಪಾಯವಾಗದಂತೆ ಎಚ್ಚರ ವಹಿಸಿದರು. ಈ ನಡುವೆಯೇ ವಿದ್ಯಾರ್ಥಿಗಳು ಹಾಗೂ ಮುಖ್ಯ ಶಿಕ್ಷಕಿ ಜೇನು ಹುಳುಗಳ ಕಡಿತಕ್ಕೆ ಒಳಗಾದರು.
ಅಸ್ವಸ್ಥಗೊಂಡವರನ್ನು ತಕ್ಷಣ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಎಲ್ಲರೂ ಚೇತರಿಸಿಕೊಂಡಿದ್ದಾರೆ. ಘಟನೆಯ ಹಿನ್ನೆಲೆ ವಿರಾಜಪೇಟೆ ನಗರ ಠಾಣಾಧಿಕಾರಿ ಪ್ರಮೋದ್ ಕುಮಾರ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಮಕ್ಕಳಿಗೆ ಅಗತ್ಯ ಚಿಕಿತ್ಸೆ ಒದಗಿಸಲು
ಸಹಕರಿಸಿದರು.













