ನ್ಯೂಸ್ ನಾಟೌಟ್ : ವಾಲ್ಮೀಕಿ ಸಮಾಜದ ವಿರುದ್ಧ ಅಶ್ಲೀಲ ಪದ ಬಳಕೆ ಸಂಬಂಧ ಮಾಜಿ ಸಂಸದ ರಮೇಶ್ ಕತ್ತಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬೆಳಗಾವಿ ಕ್ಯಾಂಪ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸ್ ದಾಖಲಾಗಿದೆ.
ಡಿಸಿಸಿ ಬ್ಯಾಂಕ್ ಚುನಾವಣೆ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಬಗ್ಗೆ ರಮೇಶ್ ಕತ್ತಿ ಹಗುರವಾಗಿ ಮಾತನ್ನಾಡಿದ್ದರು. ಇದೀಗ ವಾಲ್ಮೀಕಿ ಸಮಾಜದ ಮುಖಂಡ ರಾಜಶೇಖರ್ ತಳವಾರ ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಾಗಿದೆ.
ಇನ್ನು ಮತ್ತೊಂದು ಕಡೆ ನಾಳೆ ರಾಜ್ಯಾದ್ಯಂತ ವಾಲ್ಮೀಕಿ ಸಮಾಜದ ನಾಯಕರು ಹೊರಾಟಕ್ಕೆ ಕರೆ ನೀಡಿದ್ದಾರೆ. ಕತ್ತಿ ಹೇಳಿಕೆ ವಿರುದ್ಧ ಬೆಳಗಾವಿಯಲ್ಲಿ ವಾಲ್ಮೀಕಿ ಸಮಾಜದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಲಾಗಿದೆ.
ಇನ್ನು, ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿರುವ ರಮೇಶ್ ಕತ್ತಿ, ನನ್ನ ಹೇಳಿಕೆಯನ್ನ ತಿರುಚಲಾಗಿದೆ. ಡಾಲ್ಬಿ ಹಚ್ಚಲು ಅಭಿಮಾನಿಗಳು ಒತ್ತಾಯಿಸಿದಾಗ ನಾನು ಬ್ಯಾಡರೋ (ಬೇಡ) ಎಂದಿದ್ದೆ. ನನ್ನ ಹೇಳಿಕೆಯನ್ನ ನನ್ನ ಗೆಲುವು ಸಹಿಸಲಾಗದ ವಿರೋಧಿಗಳಿಂದ ತಿರುಚಲಾಗಿದೆ. ಇದರಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಕತ್ತಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.













