ನ್ಯೂಸ್ ನಾಟೌಟ್ : ರಾಜ್ಯದಲ್ಲಿ ಜಾತಿಗಣತಿ ಸಮೀಕ್ಷೆ ನಡೆಯುತ್ತಿದೆ.ಆದರೆ ಇದರಿಂದ ಒಂದಲ್ಲ ಒಂದು ತಾಂತ್ರಿಕ ಸಮಸ್ಯೆ ಎದುರಾಗಿದ್ದು ಇನ್ನೂ ಬಗೆಹರಿದಿಲ್ಲ.ದಾವಣಗೆರೆಯಲ್ಲಿ ಒಂದು ಕಡೆ ಭಾರೀ ಯಡವಟ್ಟಾಗಿದ್ದು, ಸಮೀಕ್ಷೆ ವೇಳೆ ಶಿಕ್ಷಕರು ಹಿಂದೂ ವ್ಯಕ್ತಿಯೊಬ್ಬರ ಆಧಾರ್ ನಂಬರ್ ಹಾಕಿದ್ರೆ ಮುಸ್ಲಿಂ ವ್ಯಕ್ತಿಗಳ ಹೆಸರು ಬರುತ್ತಿದೆ ಅನ್ನುವ ವಿಚಾರ ಬೆಳಕಿಗೆ ಬಂದಿದೆ.
ನಗರದ ಎಂಸಿಸಿ ಬಿ ಬ್ಲಾಕ್ನಲ್ಲಿ ಸಮೀಕ್ಷೆ ಮಾಡುವಾಗ ಈ ರೀತಿ ಯಡವಟ್ಟಾಗಿದೆ. ವೈದ್ಯರಾದ ಹರ್ಷ ಎಂಬವರ ಮನೆಗೆ ಗಣತಿಗೆ ತೆರಳಿದ್ದಾಗ ಅವರ ಆಧಾರ್ ನಂಬರ್ ಹಾಕಿದ್ರೆ ಅಪೋರೀಜಾ, ಶರೀಪ್ ಬಾನು ಎಂಬ ಹೆಸರುಗಳನ್ನು ತೋರಿಸುತ್ತಿದೆ. ಇದರಿಂದ ಸಮೀಕ್ಷೆಗೆ ಬಂದ ಶಿಕ್ಷಕರಲ್ಲಿ ಗೊಂದಲ ಉಂಟಾಗಿದೆ. ಅಲ್ಲದೇ ಮನೆಯ ಸದಸ್ಯರು ಇದರಿಂದ ಗೊಂದಲಕ್ಕೊಳಗಾಗಿದ್ದಾರೆ.
ಕೊನೆಗೆ ಮನೆಯ ಸದಸ್ಯರ ಒಂದೊಂದೇ ಹೆಸರು ನಮೂದಿಸಿಕೊಂಡು ಶಿಕ್ಷಕರು ಗಣತಿಯನ್ನು ಮುಗಿಸಿಕೊಂಡು ಹೋಗಿದ್ದಾರೆ. ಸಮೀಕ್ಷೆ ವೇಳೆ ಆದ ಯಡವಟ್ಟನ್ನು ಹರ್ಷ ಅವರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಹೆಸರುಗಳನ್ನು ಡಿಲೀಟ್ ಮಾಡಿಸಿ ಸಮಸ್ಯೆ ಸರಿಪಡಿಸುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ













