ನ್ಯೂಸ್ ನಾಟೌಟ್: ಒಂದು ಒಳ್ಳೆಯ ಕೆಲಸ ನೊಂದವರ ಕಣ್ಣೀರನ್ನು ಒರೆಸುವ ಶಕ್ತಿಯನ್ನು ಹೊಂದಿದೆ. ಅಂತಹ ಸತ್ಕಾರ್ಯವನ್ನು ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ಹಾಗೂ ಅವರ ಶ್ರೀ ಕುರುಂಜಿ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಸ್ ಕೆಐ) ತಂಡ ಮಾಡಿದೆ.

ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸುಳ್ಯದ ಅರಂಬೂರಿನ ತಿಮ್ಮಪ್ಪ ಅನ್ನುವವರು ಹಲವು ವರ್ಷಗಳಿಂದ ಉದ್ಯೋಗಿಯಾಗಿ ಕೆಲಸ ಮಾಡಿದ್ದರು. ಸೇವೆಯುದ್ದಕ್ಕೂ ನಿಷ್ಠೆಯಿಂದ ಕೆಲಸ ಮಾಡಿದ್ದ ತಿಮ್ಮಪ್ಪ ಅವರ ಬದುಕಿನಲ್ಲಿ ಹಠಾತ್ ಕ್ಯಾನ್ಸರ್ ಎಂಬ ಮಹಾಮಾರಿ ಪ್ರವೇಶಿಸಿತು. ಇವರನ್ನೇ ನಂಬಿದ್ದ ಇಬ್ಬರು ಹೆಣ್ಣು ಮಕ್ಕಳು, ಪತ್ನಿಗೆ ಮುಂದೆ ದಿಕ್ಕು ತೋಚದಂತಹ ಪರಿಸ್ಥಿತಿ. ಮಕ್ಕಳ ಮುಂದಿನ ಬದುಕಿನ ಕಥೆ ಏನು..? ಅನ್ನುವುದೇ ದೊಡ್ಡ ಪ್ರಶ್ನೆಯಾಗಿತ್ತು. ತಿಮ್ಮಪ್ಪ ಅವರ ಮನೆ ಕೂಡ ಶಿಥಿಲಾವಸ್ಥೆಯಲ್ಲಿತ್ತು. ಈ ವಿಷಯ ತಿಳಿದ ಅಕ್ಷಯ್ ಕೆ.ಸಿ ಅವರು ತಿಮ್ಮಪ್ಪ ಅವರ ಮನೆಗೆ ಭೇಟಿ ನೀಡಿದರು. ಮನೆಯ ಪರಿಸ್ಥಿತಿಯನ್ನು ಕಂಡು ಮಮ್ಮಲ ಮರುಗಿದರು. ಮೊದಲನೆಯದಾಗಿ ಮನೆಯನ್ನು ಸರಿಪಡಿಸಿಕೊಡುವುದಕ್ಕೆ ಅಕ್ಷಯ್ ನಿರ್ಧರಿಸಿದರು. ಮಕ್ಕಳ ವಿದ್ಯಾಭ್ಯಾಸಕ್ಕೂ ನೆರವಾಗುವ ಭರವಸೆ ನೀಡಿದರು. ಅಕ್ಷಯ್ ಕೆ.ಸಿ ನಿರ್ದೇಶನದಂತೆ ತಿಮ್ಮಪ್ಪ ಅವರ ಇಡೀ ಮನೆಯ ಕೆಲಸವನ್ನು ಸಾಯಿ ರಾಂ ಅವರ ನೇತೃತ್ವದಲ್ಲಿ ಎಸ್ ಕೆ ಐ ತಂಡವು ಕೆಲವು ತಿಂಗಳಲ್ಲಿ ಮಾಡಿ ಮುಗಿಸಿತು. ಇತ್ತೀಚೆಗೆ ನವೀಕೃತ ಮನೆಯಲ್ಲಿ ಪೂಜೆಯೂ ನಡೆದು ಕುಟುಂಬ ನೆಮ್ಮದಿಯ ಜೀವನ ಆರಂಭಿಸಿತ್ತು. ಮನೆಗೆ ಕುಟೀರ ವಿದ್ಯುತ್ ವ್ಯವಸ್ಥೆ ಇತ್ತು. ಪೂರ್ಣ ವಿದ್ಯುತ್ ಸಂಪರ್ಕ ಇರಲಿಲ್ಲ. ಈ ವಿದ್ಯುತ್ ಸಂಪರ್ಕದ ಬದಲಿಗೆ ಎಸ್ ಕೆ ಐ ವತಿಯಿಂದ ನೂತನವಾಗಿ ವಿದ್ಯುತ್ ವ್ಯವಸ್ಥೆ ಮಾಡಿಕೊಡಲಾಯಿತು. ಇದರ ದಾಖಲೆ ಪತ್ರಗಳನ್ನು ಅಕ್ಷಯ್ ಕೆ.ಸಿ ಅವರು ಆಯುಧ ಪೂಜೆಯ ಶುಭ ಸಂದರ್ಭದಲ್ಲಿ ತಿಮ್ಮಪ್ಪ ಅವರಿಗೆ ಹಸ್ತಾಂತರಿಸಿದರು. ಈ ಮೂಲಕ ನವರಾತ್ರಿಯ ಸಂದರ್ಭದಲ್ಲಿ ಬಡವರ ಮನೆಯ ದೀಪ ಬೆಳಗಿಸಲಾಯಿತು.
ಉದ್ಯೋಗಿಯನ್ನು ಉದ್ಯೋಗಿಯಾಗಿ ನೋಡದೆ ತಮ್ಮ ಕುಟುಂಬದ ಸದಸ್ಯನಂತೆ ಕಾಣುವ ಯಜಮಾನರು ಇತ್ತೀಚಿನ ದಿನಗಳಲ್ಲಿ ತೀರ ವಿರಳ. ಚೆನ್ನಾಗಿ ದುಡಿಸಿಕೊಂಡು ಉಪಯೋಗವಿಲ್ಲವೆಂದ ಬಳಿಕ ಅವರಿಗೆ ವೇತನವನ್ನೂ ನೀಡದೆ ಕಡೆಗಣಿಸುವ ಜನರಿರುವ ಈ ಕಾಲದಲ್ಲಿ ದಿವಂಗತ ಕುರುಂಜಿ ವೆಂಕಟರಮಣ ಗೌಡರ ಮೊಮ್ಮಗ, ಡಾ.ಕೆ.ವಿ ಚಿದಾನಂದ ಹಾಗೂ ಶೋಭಾ ಚಿದಾನಂದ ದಂಪತಿಯ ಸುಪುತ್ರ ಅಕ್ಷಯ್ ಕೆ.ಸಿ ಮಾಡಿದ ಸತ್ಕಾರ್ಯವು ಎಲ್ಲರಿಗೂ ಪ್ರೇರಣೆಯಾಗಿದೆ.













