ನ್ಯೂಸ್ ನಾಟೌಟ್ : ಕೆಮ್ಮು ಔಷಧಿ ಮಕ್ಕಳ ಜೀವಗಳನ್ನು ಕೊಲ್ಲುತ್ತಿದೆ ಎಂದು ವರದಿಯಾಗಿದ್ದು ಬೆಚ್ಚಿ ಬೀಳಿಸುವ ಘಟನೆ ಬಗ್ಗೆ ವರದಿಯಾಗಿದೆ.ಒಂದಲ್ಲ ಎರಡಲ್ಲ 12 ಮಕ್ಕಳ ಪ್ರಾಣಕ್ಕೆ ಕುತ್ತು ತಂದಿದೆ.
ಈ ಸಾವು ದೇಶದಲ್ಲಿ ಸಂಚಲನ ಮೂಡಿಸಸಿದ್ದು ಮಧ್ಯಪ್ರದೇಶದ ಛಿಂದ್ವಾರಾ, ರಾಜಸ್ಥಾನದ ಭರತ್ಪುರ ಮತ್ತು ಸಿಕಾರ್ನಲ್ಲಿ ಇಲ್ಲಿಯವರೆಗೆ 12 ಮಕ್ಕಳು ಮೂತ್ರಪಿಂಡ ವೈಫಲ್ಯದಿಂದ ಮೃತಪಟ್ಟಿದ್ದಾರೆ. ಅದಕ್ಕೆ ಕಾರಣ ಕೆಮ್ಮಿಗೆ ನೀಡುವ ಸಿರಪ್ ಎನ್ನಲಾಗಿದೆ.
ಈ ಬೆನ್ನಲ್ಲೇ ಕೇಂದ್ರ ಆರೋಗ್ಯ ಇಲಾಖೆ ಎಚ್ಚೆತ್ತು ಕೊಂಡಿದೆ. ಮಕ್ಕಳಿಗೆ ಕೆಮ್ಮು ಔಷಧಿಯ ಕುರಿತು ಸಲಹೆ ನೀಡಿದೆ. ಆರೋಗ್ಯ ಸಚಿವಾಲಯವು ಎಲ್ಲಾ ರಾಜ್ಯಗಳಿಗೆ ಪ್ರಮುಖ ಆದೇಶವನ್ನು ಪಾಲಿಸುವಂತೆ ಸೂಚಿಸಿದೆ. ಮಕ್ಕಳಿಗೆ ಕೆಮ್ಮು ಔಷಧಿಯನ್ನು ಬಹಳ ಎಚ್ಚರಿಕೆಯಿಂದ ಮತ್ತು ಸೀಮಿತ ಪ್ರಮಾಣದಲ್ಲಿ ನೀಡಬೇಕು ಎಂದಿದೆ.
ಕೆಮ್ಮು ಮತ್ತು ಶೀತದಿಂದ ಬಳಲುತ್ತಿರುವ ಹೆಚ್ಚಿನ ಮಕ್ಕಳು ತಾವಾಗಿಯೇ ಗುಣಮುಖರಾಗುತ್ತಾರೆ. ಅವರಿಗೆ ಔಷಧಿಗಳ ಅಗತ್ಯವಿಲ್ಲ. 2 ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ಮತ್ತು ಶೀತ ಔಷಧಿಯನ್ನು ನೀಡಬಾರದು. ಈ ಔಷಧಿಗಳನ್ನು ಸಾಮಾನ್ಯವಾಗಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಡದಿಲ್ಲ. ವೈದ್ಯರು ಪರೀಕ್ಷೆಯ ನಂತರ ಅಗತ್ಯವೆಂದು ಭಾವಿಸಿದರೆ ಮಾತ್ರ 5 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಔಷಧಿಗಳನ್ನು ನೀಡಬೇಕು. ಇದನ್ನು ಕಡಿಮೆ ಪ್ರಮಾಣದಲ್ಲಿ, ಅಲ್ಪಾವಧಿಗೆ ನೀಡಬೇಕು. ವಿಶ್ರಾಂತಿ ಮತ್ತು ಸಹಾಯಕ ಆರೈಕೆಗೆ ಆದ್ಯತೆ ನೀಡಬೇಕು ಕೇಂದ್ರ ಆರೋಗ್ಯ ಸಚಿವಾಲಯ ಶಿಫಾರಸು ಮಾಡಿದೆ.
GMP ಅಡಿಯಲ್ಲಿ ತಯಾರಿಸಿದ ಸುರಕ್ಷಿತ ಔಷಧಿಗಳನ್ನು ಮಾತ್ರ ಸಂಗ್ರಹಿಸಿ ನೀಡಬೇಕು ಎಂದು ಕೇಂದ್ರ ಹೇಳಿದೆ. ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ಸರ್ಕಾರಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಜಿಲ್ಲಾ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಿಗೆ ಸೂಚನೆ ನೀಡಬೇಕು. ಈ ಬಗ್ಗೆ ಹೆಚ್ಚು ಪ್ರಚಾರ ಮಾಡುವಂತೆ ತಿಳಿಸಿದೆ.
ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ಕೇವಲ ಹದಿನೈದು ದಿನಗಳಲ್ಲಿ ಕೆಮ್ಮಿನ ಸಿರಪ್ಗಳಿಂದ ಮೂತ್ರಪಿಂಡ ವೈಫಲ್ಯ ಸಂಭವಿಸಿ ಒಂಬತ್ತು ಮಕ್ಕಳು ಮೃತಪಟ್ಟಿದ್ದಾರೆ. ಇದು ದೇಶಾದ್ಯಂತ ಸಂಚಲನ ಮೂಡಿಸಿದೆ. ಈ ಹಿಂದೆ ಗ್ಯಾಂಬಿಯಾ ಮತ್ತು ಉಜ್ಬೇಕಿಸ್ತಾನ್ನಲ್ಲಿ ಭಾರತೀಯ ಔಷಧ ಕಂಪನಿಗಳು ತಯಾರಿಸಿದ ಕೆಮ್ಮಿನ ಸಿರಪ್ಗಳಿಂದ ಮಕ್ಕಳು ಮೃತಪಟ್ಟಿರೋದು ಬೆಳಕಿಗೆ ಬಂದಿತ್ತು.













