ನ್ಯೂಸ್ ನಾಟೌಟ್ : ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭಗೊಂಡ ಮೊದಲ ದಿನವೇ ಬಿಗ್ ಬಾಸ್ ಬಿಗ್ ಶಾಕ್ ನೀಡಿದ್ದಾರೆ. ಕರಾವಳಿಯಿಂದ ಬಂದ ಯೂಟ್ಯೂಬರ್ ರಕ್ಷಿತಾ ಶೆಟ್ಟಿ (Rakshita Shetty) ಅವರಿಗೆ ಗೇಟ್ಪಾಸ್ ನೀಡಲಾಗಿದೆ.
ಶೋ ಆರಂಭಗೊಂಡಾಗ ಸುದೀಪ್ ಅವರು ಮೊದಲ ದಿನವೇ ಒಬ್ಬರು ಮನೆಯಿಂದ ಹೊರ ಬರಲಿದ್ದಾರೆ ಎಂದು ಸರ್ಪ್ರೈಸ್ ನೀಡಿದ್ದರು. ಅದರಂತೆ ರಕ್ಷಿತಾ ಶೆಟ್ಟಿ ಅವರನ್ನು ಮನೆಯವರು ಹೊರಹಾಕಿದ್ದಾರೆ.
ಆಗಿದ್ದೇನು?
ಮನೆ ಪ್ರವೇಶಿಸಿದ ಒಟ್ಟು 6 ಸ್ಪರ್ಧಿಗಳು ಒಂಟಿಗಳಾಗಿ, 5 ಸ್ಪರ್ಧಿಗಳು ಜಂಟಿಗಳಾಗಿ ಹಾಗೂ 3 ಸ್ಪರ್ಧಿಗಳು ಅತಂತ್ರರಾಗಿ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿದ್ದರು. ರಕ್ಷಿತಾ ಶೆಟ್ಟಿ, ಮಾಳು ನಿಪನಾಳ, ಸ್ಪಂದನಾ ಅವರು ಅತಂತ್ರ ಸ್ಥಿತಿಯಲ್ಲಿ ಇದ್ದರು.
ಮನೆಯಲ್ಲಿ ಇಂದು ಅತಂತ್ರರಾಗಿದ್ದ ಮೂವರಲ್ಲಿ ಇಬ್ಬರನ್ನು ಉಳಿಸಿ, ಒಬ್ಬರನ್ನು ಹೊರಗೆ ಕಳಿಸುವಂತೆ ಸೂಚಿಸಲಾಯಿತು. ಹೊರಗೆ ಕಳುಹಿಸುವ ನಿರ್ಧಾರವನ್ನು 6 ಒಂಟಿಗಳಿಗೆ ನೀಡಲಾಯಿತು.
ಒಂಟಿಗಳ ಮುಂದೆ ನಿಂತು ರಕ್ಷಿತಾ ಶೆಟ್ಟಿ, ಮಾಳು ನಿಪನಾಳ ಹಾಗೂ ಸ್ಪಂದನಾ ಅವರು ತಮ್ಮ ಸಾಮರ್ಥ್ಯವನ್ನು ಹೇಳಿ ನನಗೆ ಬಿಗ್ ಬಾಸ್ ವೇದಿಕೆ ಯಾಕೆ ಬೇಕು ಎಂದು ಹೇಳಿದರು.
ಮಾಳು ನಿಪನಾಳ ಅವರು, ನಾನು ಮಿಡ್ಲ್ ಕ್ಲಾಸ್ ಹುಡುಗ. 2-3 ದಿನ ಆದರೂ ಈ ಮನೆಯಲ್ಲಿ ಇರಬೇಕು ಎಂಬ ಆಸೆ ಇದೆ. ಉಳಿಸೋದು ಬಿಡೋದು ನಿಮ್ಮ ಕೈಯಲ್ಲಿದೆ ಎಂದು ಹೇಳಿದರೆ ಸ್ಪಂದನಾ ಅವರು, ನನಗೆ ಈ ಬಿಗ್ ಬಾಸ್ ಬಹಳ ಮುಖ್ಯ ಎಂದು ಮನವಿ ಮಾಡಿದರು.
ರಕ್ಷಿತಾ ಅವರು, ನಿಮ್ಮನ್ನು ಯಾವ ರೀತಿ ಮನವೊಲಿಸಬೇಕು ಎನ್ನುವುದು ನನಗೆ ಗೊತ್ತಾಗುತ್ತಿಲ್ಲ. ತುಳುನಾಡಲ್ಲಿ ಸ್ವಲ್ಪ ಜನರಿಗೆ ನಾನು ಪರಿಚಯವಿದ್ದೇನೆ. ಇಲ್ಲಿ ಇದ್ದರೆ ಕನ್ನಡ ಕಲಿಯುತ್ತೇನೆ ಎಂದು ಹೇಳಿದರು.
ಅಂತಿಮವಾಗಿ ಅಶ್ವಿನಿ ಗೌಡ ಅವರು ಎಲ್ಲರ ಪರವಾಗಿ ನಿರ್ಧಾರ ಕೈಗೊಂಡು ರಕ್ಷಿತಾ ಶೆಟ್ಟಿಗೆ ಗೇಪ್ ಪಾಸ್ ನೀಡಿ ಮಾಳು ನಿಪನಾಳ ಮತ್ತು ಸ್ಪಂದನಾ ಅವರನ್ನು ಉಳಿಸಿಕೊಂಡರು.













