ನ್ಯೂಸ್ ನಾಟೌಟ್: ವೃದ್ಧರೊಬ್ಬರು ಸುರಂಗದ ಬಾವಿಯಲ್ಲಿದ್ದೇನೆ ಎಂದು ಪತ್ರ ಬರೆದಿಟ್ಟು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಜೀರು ಗ್ರಾಮದ ಬೊಳ್ಳೂರು ಎಂಬಲ್ಲಿ ಭಾನುವಾರ ರಾತ್ರಿ ನಡೆದಿದೆ. ಮೃತಪಟ್ಟ ವೃದ್ಧರನ್ನು ಲಕ್ಷ್ಮಣ ಸಾಲಿಯಾನ್( 75) ಎಂದು ಗುರುತಿಸಲಾಗಿದೆ.
ಭಾನುವಾರ ರಾತ್ರಿ ಟಿವಿ ವೀಕ್ಷಣೆ ಮಾಡುತ್ತಿದ್ದ ಇವರು ಮನೆ ಮಂದಿ ಮಲಗಿದ ಬಳಿಕ ಪತ್ರ ಬರೆದಿಟ್ಟು ಸಮೀಪದ ತೋಟದ ಬಾವಿಗೆ ಹಾರಿ ಆತ್ಮಹತ್ಯೆಗೈದಿದ್ದಾರೆ ಎಂದು ತಿಳಿದು ಬಂದಿದೆ. ಪತ್ರ ಬರೆದಿಟ್ಟಿದ್ದ ಅವರು “ನಾನು ಸಮೀಪದ ಸುರಂಗದ ಬಾವಿಯಲ್ಲಿದ್ದೇನೆ. ನನ್ನ ಮೃತದೇಹವನ್ನು ಮಂದಿರದ ಆಂಬ್ಯುಲೆನ್ಸ್ ನಲ್ಲಿ ಸಾಗಿಸಿ. ಯಾರೂ ಬೇಸರಿಸಬೇಡಿ’ ಎಂದು ಪತ್ರದಲ್ಲಿ ಬರೆದಿದ್ದರು ಎಂದು ತಿಳಿದುಬಂದಿದೆ.
ಲಕ್ಷ್ಮಣ ಸಾಲಿಯಾನ್ ಹಲವಾರು ವರ್ಷಗಳಿಂದ ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಟೈಲರ್ ವೃತ್ತಿ ಮಾಡಿಕೊಂಡಿದ್ದ ಅವರು, ಇತ್ತೀಚೆಗೆ ವಿಪರೀತವಾಗಿ ಕಾಲಿನ ಗಂಟು ನೋವು ಸಮಸ್ಯೆಯಿಂದ ಬಳಲುತ್ತಿದ್ದರು. ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ಯಾರೂ ಕೂಡ ಇಂಥ ನಿರ್ಧಾರ ಕೈಗೊಳ್ಳಬಾರದು. ಕೊಣಾಜೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.













