ಮಡಿಕೇರಿ: ಕೊಡಗಿನಲ್ಲಿ ವೀರ ಯೋಧನ ಕುಟುಂಬದ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಸೆರೆಯಾದವರನ್ನು ರಫೀಕ್ ಖಾನ್, ಇಸಾಕ್ ಖಾನ್ ಹಾಗೂ ನಾಸಿರ್ ಎಂದು ಗುರುತಿಸಲಾಗಿದೆ. ಇಸಾಕ್ ಕೊಡಗು ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎಂದು ಹೇಳಲಾಗಿದೆ. ಬಂಧಿತರೆಲ್ಲರು ಶುಂಠಿಕೊಪ್ಪ ನಿವಾಸಿಗಳಾಗಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಸೋಮವಾರ ಯೋಧ ಅಶೋಕ್ ಕುಮಾರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಹಿಂದಿನಿಂದ ಬಂದ ಕಾರೊಂದು ಡಿಕ್ಕಿಯಾಗಿತ್ತು. ಈ ವೇಳೆ ಮಾತಿನ ಚಕಮಕಿ ನಡೆದು ಒಂದು ಕೋಮಿನ ಮಂದಿ ಗುಂಪುಗಟ್ಟಿ ಯೋಧ ಅಶೋಕ್ ಹಾಗೂ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಕಾರ್ಗಿಲ್ ವಿಜಯ ದಿವಸದಂದೇ ಈ ಘಟನೆ ನಡೆದು ಹೋಗಿತ್ತು. ಆರೋಪಿಗಳ ಬಂಧನಕ್ಕೆ ಕೊಡಗಿನಾದ್ಯಂತ ಒತ್ತಾಯ ಕೇಳಿ ಬಂದಿತ್ತು.